ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ 2024ರ ಐಪಿಎಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ನಿಖರತೆಯಿಂದ ಬೌಲಿಂಗ್ ಸಂಘಟಿಸಿದ್ದರು ಎಂದು ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶಿಖರ್ ಧವನ್ (45 ರನ್) ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ 176 ರನ್ ಗಳಿಸಿತ್ತು. ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ್ದ ಮೊಹಮ್ಮದ್ ಸಿರಾಜ್ , ಅಪಾಯಕಾರಿ ಬ್ಯಾಟರ್ಗಳಾದ ಜಾನಿ ಬೈರ್ಸ್ಟೋವ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಪಡೆದು ಪಂಜಾಬ್ ಕಿಂಗ್ಸ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು.
ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದ ಕುರಿತು ಕ್ರಿಕ್ಬಝ್ ಜೊತೆ ಸಂವಾದ ನಡೆಸಿದ ವೀರೇಂದ್ರ ಸೆಹ್ವಾಗ್, ಆರ್ಸಿಬಿ ತಂಡದ ವೇಗದ ವಿಭಾಗವನ್ನು ಮೊಹಮ್ಮದ್ ಸಿರಾಜ್ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. 6.50ರ ಎಕಾನಮಿಯಲ್ಲಿ ಸಿರಾಜ್ 2 ವಿಕೆಟ್ ಪಡೆದರೆ, ಯುವ ವೇಗಿಯಶ್ ದಯಾಳ್ 4 ಓವರ್ಗಳಲ್ಲಿ 23 ರನ್ ನೀಡಿ ಸ್ಯಾಮ್ ಕರನ್ ವಿಕೆಟ್ ಪಡೆದಿದ್ದರು.
ಮೊಹಮ್ಮದ್ ಸಿರಾಜ್ ಅವರ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನವನ್ನು ನೋಡಲು ತುಂಬಾ ಸಂತಸವಾಗುತ್ತದೆ. ಪಂದ್ಯದ ಕೊನೆಯ 4 ಓವರ್ಗಳಲ್ಲಿ ಆರ್ಸಿಬಿ ಪರಿಣಾಮಕಾರಿಯಾಗಿ ಬೌಲ್ ಮಾಡಿತ್ತು. ಅದರಲ್ಲೂ ಸಿರಾಜ್ ತಾವು ಮಾಡಿದ್ದ 16ನೇ ಓವರ್ನಲ್ಲಿ ಕೇವಲ 4 ರನ್ ನೀಡಿದ್ದರೆ, 19ನೇ ಓವರ್ನಲ್ಲೂ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ರನ್ ದಾಹಕ್ಕೆ ಕಡಿವಾಣ ಹಾಕಿದ್ದರು.