ಬಾಗಲಕೋಟೆ: ಲೋಕಸಭೆ ಕ್ಷೇತ್ರದ ಚುನಾವಣೆ ಅಖಾಡ ಬಿಸಿ ಏರಿದ್ದು, ಬಿರು ಬಿಸಿಲಿನ ಮಧ್ಯೆ ಸ್ಟಾರ್ ರಾಜಕಾರಣಿಗಳು ಪ್ರಚಾರ ಸಭೆಗೆ ಬರಲಿದ್ದಾರೆ. ಮೊದಲ ಹಂತದ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದೆ. ಏ. 26 ರ ನಂತರ ನಾನಾ ಪಕ್ಷಗಳ ಸ್ಟಾರ್ ಪ್ರಚಾರಕರು ಮೊದಲ ಹಂತದ ಪ್ರಚಾರ ಮುಗಿಸಿ ಎರಡನೇ ಹಂತದಲ್ಲಿ ಉತ್ತರದ ಕಡೆಗೆ ಮುಖ ಮಾಡಲಿದ್ದಾರೆ.
ಅತ್ತ ದಕ್ಷಿಣದ ತುದಿಯಲ್ಲಿ ಮತದಾನ ನಡೆಯುತ್ತಿದ್ದಂತೆ ಇತ್ತ ಉತ್ತರದಲ್ಲಿ ಪ್ರಚಾರದ ಭರಾಟೆ ಜೋರಾಗಲಿದೆ. ನಾನಾ ಕಾರಣಗಳಿಂದ ಪ್ರತಿ ಚುನಾವಣೆಯಲ್ಲಿ ರಾಜಕಾರಣಿಗಳನ್ನು ಬಾಗಲಕೋಟೆ ಕ್ಷೇತ್ರ ಆಕರ್ಷಿಸುತ್ತದೆ. ಹಿಂದುತ್ವದ ಅಲೆ, ಕಾಂಗ್ರೆಸ್ನ ಆಡಳಿತ, ಪ್ರಭಾವಿ ಅಭ್ಯರ್ಥಿಗಳಿಂದಾಗಿ ಎಲ್ಲ ಪಕ್ಷಗಳ ರಾಷ್ಟ್ರೀಯ ನಾಯಕರು ಜಿಲ್ಲೆಯಲ್ಲಿ ಕಡ್ಡಾಯವಾಗಿ ಪ್ರಚಾರ ನಡೆಸುತ್ತಾರೆ.
ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ!
ಪ್ರಧಾನಿ ನರೇಂದ್ರ ಮೋದಿ ಏ.28 ರಂದು ಬಾಗಲಕೋಟೆಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. 2014, 2019 ರಲ್ಲಿ ಜಿಲ್ಲೆಯಲ್ಲಿ ಸಂಸದ ಗದ್ದಿಗೌಡರ ಪರ ಮೋದಿ ಪ್ರಚಾರ ನಡೆಸಿದ್ದರು. ಇದೀಗ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಜಿಲ್ಲೆಗೆ ಬರಲಿದ್ದಾರೆ. ಮರು ದಿನ ಸಂಜೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ. ಏ.27ರಂದು ಸಿಎಂ ಬನಹಟ್ಟಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.