ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ಇದೀಗ ರಣಕಣವಾಗಿ ಮಾರ್ಪಟ್ಟಿದ್ದು, ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಭಾವಿ ರಾಜಕಾರಣಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಿಜೆಪಿ ಟಿಕೆಟ್ ಪಡೆದು, ಮತ್ತೊಮ್ಮೆ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಈ ಬೆನ್ನಲ್ಲೇ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳು ಪ್ರಲ್ಹಾದ್ ಜೋಶಿ ಅವರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ.
ಅವರನ್ನು ಧಾರವಾಡ ಲೋಕಸಭಾದಿಂದ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ದಿಂಗಾಲೇಶ್ವರ ಶ್ರೀಗಳ ಮೇಲೆ ಅಪಾರವಾದ ಅಭಿಮಾನವಿದ್ದು, ಅವರು ನೀಡಿರುವ ಹೇಳಿಕೆಗಳು ನನಗೆ ಆರ್ಶೀವಾದ ಇದ್ದಂತೆ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳು ಸುಪ್ರಸಿದ್ಧ ಮಠಾಧಿಪತಿಗಳು,
ಅವರ ಮೇಲೆ ಅತೀವವಾದ ಭಕ್ತಿ ಗೌರವವಿದೆ. ಅವರ ಗುರುಗಳೊಂದಿಗೆ ಕಳೆದ 30-35 ವರ್ಷಗಳ ಸಂಬಂಧ ಹೊಂದಿದ್ದೇನೆ. ದಿಂಗಾಲೇಶ್ವರ ಶ್ರೀಗಳು ನನ್ನ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅವರ ಹೇಳಿಕೆಗಳು ನನಗೆ ಆರ್ಶೀವಾದ, ಮುಂದಿನ ದಿನಗಳಲ್ಲಿ ತಪ್ಪು ತಿಳಿವಳಿಕೆ ಸರಿಮಾಡುವ ಕೆಲಸ ಮಾಡುವೆ ಎಂದು ಹೇಳಿದರು. ಲಿಂಗಾಯತ ಸಮುದಾಯಕ್ಕೆ ಪ್ರಲ್ಹಾದ್ ಜೋಶಿ ಅನ್ಯಾಯ ಮಾಡಿದ್ದಾರೆಂಬ ಪ್ರಶ್ನೆಗೆ ನಾನು ಯಾವುದೇ ವೈಯಕ್ತಿಕ ಹೇಳಿಕೆಗೆ ಉತ್ತರ ಕೊಡುವುದಿಲ್ಲ ಎಂದು ನೋ ರಿಯಾಕ್ಷನ್ ಎಂದು ಹೊರಟರು.
ವರದಿ, ಮಾರುತಿ ಲಮಾಣಿ