ಬೆಂಗಳೂರು:- ಕರ್ನಾಟಕಕ್ಕೆ ಬರ ಪರಿಹಾರ ಕಡಿಮೆ ಘೋಷಿಸಿರುವ ಕೇಂದ್ರದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ.
ಈ ಸಂಬಂಧ ಮಾತನಾಡಿದ ಡಿಕೆಶಿ, ಬರಗಾಲದ ಪರಿಸ್ಥಿತಿ ಬಗ್ಗೆ ಗೊತ್ತಿದೆ. 123 ತಾಲ್ಲೂಕಿನಲ್ಲಿ 122 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಸಮಸ್ಯೆ ಆಗಿರಲಿಲ್ಲ. 46.9 ಲಕ್ಷ ಹೆಕ್ಟರ್ ಕೃಷಿ ಭೂಮಿ ನಷ್ಟ ಆಗಿದೆ. 223 ತಾಲ್ಲೂಕುಗಳನ್ನ ಬರಗಾಲ ಎಂದು ಘೋಷಿಸಿದ್ದೇವೆ. ನಾವು ಮನವಿ ಕೊಟ್ಟಾಗ 35 ಸಾವಿರ ಕೋಟಿಗೂ ಅಧಿಕ ಹಣ ನಷ್ಟವಾಗಿದೆ. ಜೊತೆಗೆ 29 ಜಿಲ್ಲೆಗಳಲ್ಲಿ ಆದ ತೊಂದರೆಯನ್ನ ಕಮೀಟಿ ಗಮನಿಸಿದೆ. ಕೇಂದ್ರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನ ತಿಳಿಸಲು 2023 ಅಕ್ಟೋಬರ್ 24ರಂದು ರಾಜ್ಯದ ಸಚಿವರುಗಳಾದ ಕೃಷಿ ಮತ್ತು ಕಂದಾಯ ಸಚಿವರು ಹೋಗಿದ್ದರೆ, ಡಿಸೆಂಬರ್19ರಂದು ಸಿಎಂ, ಕಂದಾಯ ಸಚಿವರು ಇಬ್ಬರೂ ಭೇಟಿ ಮಾಡಿದ್ದರು. ಜ.20ರಂದು ಸಿಎಂ ಮತ್ತೆ ಪ್ರಧಾನಿಗಳ ಬಳಿ ಮನವಿ ಇಟ್ಟರು. ಮಾರ್ಗಸೂಚಿ ಅನ್ವಯ ನಾವು ಮನವಿ ಸಲ್ಲಿಸಿದ್ದೆವು ಎಂದರು.
ಇನ್ನು ನರೇಗಾದಲ್ಲಿ 100 ದಿನ ಹೆಚ್ಚುವರಿ ಉದ್ಯೋಗ ಕೊಡುವ ಕೆಲಸ ಮಾಡಲಿಲ್ಲ, ಇದು ಖಂಡನೀಯ. ನಿಮ್ಮ ಸಮಯ ಕ್ಲೋಸ್ ಆಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರ ಮೋಸ ಮಾಡಿದೆ. 35 ಸಾವಿರ ಕೋಟಿ ನಷ್ಟ ಆಗಿದ್ದರೆ, 18 ಸಾವಿರ ಕೋಟಿಗೆ ನಾವು ಮನವಿ ಮಾಡಿದ್ದೇವು. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ನಮಗೆ ಅನಿವಾರ್ಯ ಆಯ್ತು. ಕೇಂದ್ರ ಸರ್ಕಾರದ ವಕೀಲರು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದ್ದಾರೆ. ಅನ್ಯಾಯ ಆಗುತ್ತಿರುವ ಬಗ್ಗೆ ಅವರು ಹೇಳಿದ್ದಾರೆ. ನಮಗೆ 3,454 ಕೋಟಿ ರೂ. ಕೊಟ್ಟಿದ್ದಾರೆ, ಪತ್ರ ಈಗ ತಲುಪಿದೆ. ಖಾತೆಗೆ ಯಾವಾಗ ಜಮಾ ಆಗುತ್ತೆ ಅನ್ನೋದು ಗೊತ್ತಿಲ್ಲ. ಇದು ರಾಜಕೀಯ ಅಲ್ಲ, ರಾಜ್ಯಕ್ಕೆ ಆಗುತ್ತಿರುವ ದೊಡ್ಡ ದ್ರೋಹ, ರಾಜ್ಯದ ಹಿತಕ್ಕೆ ಕೇಂದ್ರ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.