ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾರರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಬಿಎಲ್ಒಗಳಿಗೆ ತಿಳಿಸಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಬೆಂಗಳೂರು ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
Gruha Lakshmi Money: ಗೃಹಲಕ್ಷ್ಮಿ 7ನೇ ಕಂತಿನ ಹಣ ಬಂದಿಲ್ಲವೇ..? ಹಾಗಿದ್ರೆ ಈ ಕೆಲಸ ತಪ್ಪದೆ ಮಾಡಿ ಹಣ ಪಡೆದುಕೊಳ್ಳಿ
ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ಅಂತಿಮ ಘಟ್ಟದ ಅಧಿಕಾರಿಗಳಾಗಿದ್ದು, ತಳಮಟ್ಟದಲ್ಲಿ ಜನರ ಸಂಪರ್ಕ ಹಾಗೂ ಅವರಿಂದ ಮತದಾನ ಮಾಡಿಸುವ ಸಾಮರ್ಥ್ಯವೆಲ್ಲವೂ ನಿಮ್ಮ ಬಳಿ ಇರಲಿದೆ. ಆದ್ದರಿಂದ ಎಲ್ಲರೂ ತಮ್ಮ ಆದ್ಯ ಕರ್ತವ್ಯವನ್ನು ತಿಳಿದು ಜನರಲ್ಲಿ ಅರಿವು ಮೂಡಿಸಿ ತಪ್ಪದೆ ಮತದಾನ ಮಾಡಿಸಬೇಕೆಂದು ತಿಳಿಸಿದರು.
ಬೂತ್ ಮಟ್ಟದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡಿ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಬೇಕು. ನಗರದಲ್ಲಿ ಮತದಾನ ಶೇಖಡಾವಾರು ಹೆಚ್ಚಳಕ್ಕೆ ಎಲ್ಲರೂ ಶ್ರಮವಹಿಸಬೇಕೆಂದು ಹೇಳಿದರು.
ನಗರದಲ್ಲಿ ಬರುವ ದೊಡ್ಡ ದೊಡ್ಡ ಸಮುಚ್ಚಯಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆಗಳನ್ನು ನಡೆಸಿ ಮತಗಟ್ಟೆಗಳಲ್ಲಿರುವ ಸೌಲಭ್ಯ, 85 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನವಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಈ ವೇಳೆ ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಕಾಂತರಾಜು ಬೆಂಗಳೂರು ನಗರ ಜಿಲ್ಲೆಯ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನೋಡಲ್ ಅಧಿಕಾರಿಯಾದ ಅನಿತಾ, ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.