ಹುಬ್ಬಳ್ಳಿ: ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನ-ಬೆಳ್ಳಿಯ ಒಡವೆ ಹಾಗೂ ನಗದು ಹಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಸಾರಿಗೆ ಸಂಸ್ಥೆಯ ಚಾಲಕ ಕಂ ಕಂಡಕ್ಟರ್ ರೊಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಕೆ ಎ 25 ಎಫ್ 32 81 ಸಂಖ್ಯೆಯ ನಿರ್ವಾಹಕ ರಹಿತ ನಾನ್ ಸ್ಟಾಪ್ ಬಸ್ಸು ಶನಿವಾರ ಬೆಳಿಗ್ಗೆ ಹಾವೇರಿಯಿಂದ ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ಸಿನಿಂದ ಇಳಿಯುವಾಗ ಪ್ರಯಾಣಿಕರೊಬ್ಬರು ಪರ್ಸ್ ಬಿಟ್ಟು ಹೋಗಿದ್ದಾರೆ. ಅದನ್ನು ಬೇರೊಬ್ಬ ಮಹಿಳೆ ತೆಗೆದೆಕೊಳ್ಳುವುದನ್ನು ಗಮನಿಸಿದ ಅದೇ ಬಸ್ಸಿನಲ್ಲಿದ್ದ ಸಂಸ್ಥೆಯ ಸಿಬ್ಬಂದಿಯೊಬ್ಬರು ಪ್ರಶ್ನಿಸಿದ್ದಾರೆ.ಆಗ ಮಹಿಳೆ ಪರ್ಸ್ ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ. ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಕಮ್ ನಿರ್ವಾಹಕರಾದ ಎಂ.ಎಸ್. ಹಬ್ಬದ ರೊಂದಿಗೆ ಪರ್ಸ್ ತೆರೆದು ನೋಡಲಾಗಿ ಅದರಲ್ಲಿ 40ಗ್ರಾಂ ಚಿನ್ನದ ಸರ, 16ಗ್ರಾಂ ಜುಮಿಕಿ, 100 ಗ್ರಾಂ ಬೆಳ್ಳಿಯ ಕಾಲು ಚೈನುಗಳು ಹಾಗೂ ರೂ. 500 ನಗದು ಹಣವಿರುವುದು ಕಂಡುಬಂದಿದೆ.
ಹೆಚ್ ಡಿ ರೇವಣ್ಣ ಬಂಧನ.. ಎಲ್ಲವೂ ಕಾನೂನು ಪ್ರಕಾರ ನಡೆಯಲಿದೆ ಎಂದ ಕಾನೂನು ಸಚಿವ..!
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ನಿಲ್ದಾಣಾಧಿಕಾರಿ ವಿ.ಎಸ್. ಹಂಚಾಟೆ ರವರ ಸಮಕ್ಷಮದಲ್ಲಿ ವಾರಸುದಾರ ಪ್ರಯಾಣಿಕರಾದ ಶ್ರೀಮತಿ ನಿರ್ಮಲ ಚಂದ್ರಶೇಖರಯ್ಯ ಹಿರೇಮಠ ಎಂಬುವವರಿಗೆ ಒಡವೆ ಹಾಗೂ ನಗದು ಹಣವನ್ನು ಹಿಂದಿರುಗಿಸಲಾಯಿತು.
ಬಳಿಕ ನಿರ್ಮಲ ರವರು ಮಾತನಾಡಿ ಮೂಲತಃ ಹಾವೇರಿಯವರಾದ ತಾವು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ಮಗ ಹಾಗೂ ಮಗಳನ್ನು ಗದಗ ಜಿಲ್ಲೆಯ ಹೊಸೂರಿನಲ್ಲಿ ಹಾಸ್ಟೆಲ್ ಗೆ ಬಿಡಲು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹಾವೇರಿಗೆ ಬಂದಿದ್ದು, ಶನಿವಾರ ಅಕ್ಕನೊಂದಿಗೆ ಹಾವೇರಿಯಿಂದ ಹೊಸೂರಿಗೆ ಹೋಗುತ್ತಿದ್ದೆವು. ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಬಸ್ ಬದಲಾಯಿಸಿ ಗದಗ ಬಸ್ಸಿನಲ್ಲಿ ಪ್ರಯಾಣ ಮುಂದುವರೆಸಿದ್ದೆವು. ಟಿಕೆಟ್ ಪಡೆಯುವಾಗ ಪರ್ಸ್ ಬಿಟ್ಟು ಬಂದಿದ್ದು ಗಮನಕ್ಕೆ ಬಂದಿದೆ. ಲಕ್ಷಾಂತರ ಮೌಲ್ಯದ ಒಡವೆ ಹಾಗೂ ನಗದು ಹಣ ಕಳೆದು ಹೋಗಿದ್ದರಿಂದ ಏನು ಮಾಡಬೇಕೆಂದು ತೋಚದೇ ತುಂಬಾ ಗಾಬರಿಯಾಗಿತ್ತು. ಮರಳಿ ಸಿಕ್ಕಿದ್ದರಿಂದ ಹೋದ ಜೀವ ಬಂದಂತಾಗಿದೆ. ಚಾಲಕ ಕಂ ನಿರ್ವಾಹಕರಾದ ಹಬ್ಬದ ರವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಅಪಾರ ಮೌಲ್ಯದ ಒಡವೆ ಮತ್ತು ನಗದು ಹಣ ಹಿಂದಿರುಗಿಸಿದ ಚಾಲಕ ಕಂ ಕಂಡಕ್ಟರ್ ಎಂ.ಎಸ್. ಹಬ್ಬದ ರವರ ಸತ್ಯನಿಷ್ಟೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಸ್ ಪ್ರಯಾಣದ ವಿಶ್ವಾಸಾರ್ಹತೆ ಹಾಗೂ ಸದಭಿಪ್ರಾಯ ಹೆಚ್ಚಿಸಿದೆ. ಅವರ ಪ್ರಯಾಣಿಕ ಸ್ನೇಹಿ ವರ್ತನೆ ಇತರ ನೌಕರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.