ಸ್ಯಾಂಡಲ್ ವುಡ್ ನಟಿ, ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಹಸೆಮಣೆ ಏರುತ್ತಿದ್ದಾರೆ. ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ವರಿಸಲಿದ್ದಾರೆ. ಕೊಂಕಣಿ ಸಾಂಪ್ರದಾಯದಂತೆ ವಿವಾಹ ನಡೆಯಲಿದ್ದು, ಈ ಬಗ್ಗೆ ಮಾನ್ವಿತಾ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಮದುವೆ ಬಳಿಕ ಯಾವೆಲ್ಲ ಪ್ಲ್ಯಾನ್ ಹೊಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೇ 1ಕ್ಕೆ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದೆ. ಸಂಗೀತ್ ಕಾರ್ಯಕ್ರಮ ಮತ್ತು ಎಂಗೇಜ್ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ತಿಳಿಸಿದ್ದಾರೆ.
ಮಾನ್ವಿತಾ ಅವರದ್ದು ಲವ್ ಮ್ಯಾರೇಜ್ ಎನ್ನುವ ಗಾಸಿಪ್ ಇದೆ. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ನಮ್ಮದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಮದುವೆ ಆಗುತ್ತಿದ್ದೇವೆ. ಕನ್ನಡ ಚಿತ್ರರಂಗದ ಕಲಾವಿದರಿಗಾಗಿ ಗೆಟ್ ಟುಗೆದರ್ ಮಾಡೋ ಯೋಜನೆ ಇದೆ’ ಎಂದಿದ್ದಾರೆ.
ಸಾಮಾನ್ಯವಾಗಿ ಮದುವೆ ಆದ ಬಳಿಕ ನಟಿಯರು ಸಿನಿಮಾರಂಗದಿಂದ ದೂರವೇ ಇರುತ್ತಾರೆ. ಮದುವೆ ಬಳಿಕ ಸಿನಿಮಾ ಮಾಡುತ್ತಾ ಇರುವವರೂ ಇದ್ದಾರೆ. ಇದರಲ್ಲಿ ಒಬ್ಬೊಬ್ಬರ ನಿರ್ಧಾರ ಒಂದೊಂದು ರೀತಿ ಇದೆ. ಈ ಬಗ್ಗೆ ಮಾನ್ವಿತಾ ಮಾತನಾಡಿದ್ದಾರೆ. ‘ಮದುವೆ ನಂತರವೂ ಸಿನಿಮಾಗಳನ್ನು ಮಾಡುತ್ತೇನೆ. ವೈಯಕ್ತಿಕ ಬೇರೆ, ಪ್ರೊಫೆಷನಲ್ ಬೇರೆ. ಅದನ್ನು ಮಿಕ್ಸ್ ಅಪ್ ಮಾಡಲ್ಲ’ ಎಂದು ಹೇಳಿದ್ದಾರೆ.
ಮಾನ್ವಿತಾ ಮದುವೆಯಾಗುತ್ತಿರುವ ಅರುಣ್ ಮೈಸೂರಿನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಆಸಕ್ತಿ ಇಲ್ಲ ಎಂದು ಮಾನ್ವಿತಾ ತಿಳಿಸಿದ್ದಾರೆ.