ತೆಲುಗಿನ ಖ್ಯಾತ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಬೆಂಬಲಕ್ಕೆ ತೆಲುಗಿನ ಮತ್ತೋರ್ವ ಖ್ಯಾತ್ ನಟ ಅಲ್ಲು ಅರ್ಜುನ್ ನಿಂತಿದ್ದಾರೆ. ಪವನ್ ಕಲ್ಯಾಣ್ ಸಮಾಜಸೇವೆಯನ್ನೂ ಶ್ಲ್ಯಾಘಿಸಿರುವ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದ್ದು, ದಿನಕ್ಕೊಂದು ತಿರುವನ್ನೂ ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿವೆ. ಮೈತ್ರಿ ಪಕ್ಷಗಳನ್ನು ಬಲ ಪಡಿಸೋಕೆ ಏನೆಲ್ಲ ಕಸರತ್ತುಗಳನ್ನು ಮಾಡಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಟೊಂಕ ಕಟ್ಟಿ ನಿಂತಿದ್ದರೆ, ಪವನ್ ಬೆಂಬಲಕ್ಕೆ ಖ್ಯಾತ ನಟ ಚಿರಂಜೀವಿ ಕೂಡ ಇರುವುದಾಗಿ ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಬೆಂಬಲ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಚಿರಂಜೀವಿ, ಒಳ್ಳೆಯ ಆಡಳಿತಕ್ಕಾಗಿ ಜನಸೇನಾ ಮತ್ತು ಮೈತ್ರಿಕೂಟವನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಪವನ್ ಕಲ್ಯಾಣ್ ಮತ್ತು ಅವರ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮೇ 13ರಂದು ಆಂಧ್ರಪ್ರದೇಶದ ಚುನಾವಣೆ ನಡೆಯುತ್ತಿದೆ. ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈಗಾಗಲೇ ಮತದಾರನ ಒಲವು ಪವನ್ ಕಲ್ಯಾಣ್ ಕಡೆ ಇದೆ ಎಂದು ಹೇಳಲಾಗುತ್ತಿದೆ. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ. ಈ ಚುನಾವಣೆ ನಿಜಕ್ಕೂ ರಂಗೇರಿದೆ.