ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಅವರ ಸಹೋದರ ಗುರುನಾಥಗೌಡ ಗೌಡರ ಅವರಿಗೆ ಜೀವ ಬೆದರಿಕೆ ಬಂದಿದ್ದು, ಈ ಸಂಬಂಧ ಅವರು ತಮಗೆ ರಕ್ಷಣೆ ನೀಡುವಂತೆ ಕೋರಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಮಂಜುನಾಥ ಬೇಗೂರ ಎಂಬಾತನಿಂದ ಜೀವ ಬೆದರಿಕೆ ಕರೆ ಬಂದಿದ್ದು, ಫೆ.23 ರಂದು ಆತ ಗುರುನಾಥಗೌಡರಿಗೆ ಮಂಜುನಾಥ ಎಂಬಾತ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದಾಗ ಮಂಜುನಾಥ ಬೇಗೂರ ಹಾಗೂ ಇತರರು ಗುರುನಾಥಗೌಡರ ಮನೆ ಮುಂದೆ ಸಂಭ್ರಮಾಚರಣೆ ಮಾಡಿದ್ದರು. ಈ ವೇಳೆ ಗುರುನಾಥಗೌಡ ಹಾಗೂ ಮಂಜುನಾಥ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಗುರುನಾಥಗೌಡ ಮಂಜುನಾಥ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಅದನ್ನೇ ಮುಂದಿಟ್ಟುಕೊಂಡು ಈಗ ಗುರುನಾಥಗೌಡರಿಗೆ ಕರೆ ಮಾಡಿ ಮಂಜುನಾಥ ಧಮ್ಕಿ ಹಾಕಿದ್ದಾನೆ. ಫೆ.26 ರಂದು ಗುರುನಾಥಗೌಡರ ಮನೆ ಬಳಿ ಹೋಗಿ ಗಲಾಟೆ ಸಹ ಮಾಡಿದ್ದಾನೆ.
ಹಾಲಿನ ಜೊತೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ..! ಆರೋಗ್ಯ ಸಮಸ್ಯೆ ಗ್ಯಾರಂಟಿ
ಸದ್ಯ ಗುರುನಾಥಗೌಡರ ಮನೆಗೆ ಪೊಲೀಸ್ ಭದ್ರತೆ ನೀಡಬೇಕು. ಯೋಗೀಶಗೌಡ ಕೊಲೆ ಪ್ರಕರಣದ ಸಾಕ್ಷಿಗಳು ನ್ಯಾಯಾಲಯದಲ್ಲಿ ಆರಂಭವಾಗಲಿವೆ. ಸಾಕ್ಷಿಗಳ ಮೇಲೆ ಇದು ಪ್ರಭಾವ ಬೀರಲಿದೆ. ಈ ರೀತಿ ಧಮ್ಕಿ ಹಾಕಿರುವುದನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದ್ದಾರೆ. ಒಟ್ಟಾರೆ ಗುರುನಾಥಗೌಡರ ಇಂತಹ ಸಮಸ್ಯೆಗಳು ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಸದಾ ಒಂದಿಲ್ಲೊಂದು ಸಮಸ್ಯೆ ಈ ಕುಟುಂಬದ ಮೇಲೆ ಬರುತ್ತಲೇ ಇದ್ದು, ಈಗ ಗುರುನಾಥಗೌಡರಿಗೆ ಬಂದಿರುವ ಜೀವ ಬೆದರಿಕೆ ಪ್ರಕರಣವನ್ನು ಪೊಲೀಸರು ಯಾವ ರೀತಿ ಬಗೆಹರಿಸುತ್ತಾರೋ ಕಾದು ನೋಡಬೇಕಿದೆ.