ನವದೆಹಲಿ: ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್ ಮಾರ್ಬಲ್ ಬಾಲರಾಮ ಮೂರ್ತಿಯ ಲುಕ್ ವೈರಲ್ ಆಗಿದೆ. ರಾಜಸ್ಥಾನದ (Rajasthan) ಶಿಲ್ಪಿ ಕೆತ್ತಿದ ಮೂರ್ತಿ ಇದು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ಕಪ್ಪು ಶಿಲೆಯ ರಾಮಲಲ್ಲಾ (Ram Lalla) ವಿಗ್ರಹ ಅಯೋಧ್ಯೆಯ ಭವ್ಯ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಇನ್ನು ಎರಡು ವಿಗ್ರಹಗಳನ್ನು ದೇವಾಲಯದ ಇತರ ಭಾಗಗಳಲ್ಲಿ ಇರಿಸಲಾಗುವುದು.
ಅವುಗಳಲ್ಲಿ ಒಂದು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇದೆ. ಈ ವಿಗ್ರಹದ ಛಾಯಾಚಿತ್ರಗಳು ವೈರಲ್ ಆಗಿವೆ. ರಾಜಸ್ಥಾನದ ಶಿಲ್ಪಿ ಕೆತ್ತಿರುವ ವಿಗ್ರಹವು ದೇವಾಲಯದ ‘ಗರ್ಭಗೃಹ’ಕ್ಕೆ ಬರಲು ಮೈಸೂರು ಶಿಲ್ಪಿಯ ಮೂರ್ತಿ ಎದುರು ಪೈಪೋಟಿ ನಡೆಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಮೂರ್ತಿಯನ್ನು ರಾಮಮಂದಿರದಲ್ಲಿ ಬೇರೆಡೆ ಇರಿಸಲಾಗುತ್ತದೆ.
ಬಿಳಿ ಅಮೃತಶಿಲೆಯ ವಿಗ್ರಹವು ಪ್ರಸ್ತುತ ಟ್ರಸ್ಟ್ನಲ್ಲಿದೆ. ರಾಮಲಲ್ಲಾ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ವಿಗ್ರಹ ಇದಾಗಿದೆ. ಬಾಲರಾಮನ ಹಿಂದೆ ಕಮಾನಿನಂತಿರುವ ರಚನೆಯು ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ ಸಣ್ಣ ಶಿಲ್ಪಗಳನ್ನು ಒಳಗೊಂಡಿದೆ. ಬಾಲರಾಮನನ್ನು ಅಲಂಕರಿಸುವ ಆಭರಣಗಳು ಮತ್ತು ಬಟ್ಟೆಗಳನ್ನು ಅಮೃತಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ.
ಇದು ವಿಗ್ರಹ ಕೂಡ ಗಮನಾರ್ಹ ಕುಶಲತೆಗೆ ಹಿಡಿದ ಕೈಗನ್ನಡಿಯಂತಿದೆ. ಈಗ ದೇವಾಲಯದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ 51 ಇಂಚಿನ ಕಪ್ಪು ಗ್ರಾನೈಟ್ ವಿಗ್ರಹವನ್ನು 2.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಬಂಡೆಯಿಂದ ಕೆತ್ತಲಾಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಹೆಚ್.ಎಸ್.ವೆಂಕಟೇಶ್ ತಿಳಿಸಿದ್ದಾರೆ.