ಮನೆಗೆ ಆಧಾರವಾಗಿದ್ದ ರೇಣುಕಾ ಸ್ವಾಮಿಯನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. ಗರ್ಭಿಣಿ ಪತ್ನಿ, ವಯಸ್ಸಾದ ತಂದೆ ತಾಯಿಯರು ನಿತ್ಯ ಮಗನನ್ನು ನೆನೆದು ಕೊರಗುತ್ತಿದ್ದಾರೆ. ಇದೀಗ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಮಾತನಾಡಿದ್ದು, ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ತಾವು ಸಂಧಾನ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.
ರೇಣುಕಾ ಸ್ವಾಮಿ ಕಾಮುಕ ಎಂಬಿತ್ಯಾದಿ ಮಾತುಗಳು ಈ ಮೊದಲು ಕೇಳಿ ಬಂದಿದ್ದವು. ಈ ವೇಳೆ ಕಾಶಿನಾಥಯ್ಯ ಶಿವನಗೌಡ ಅವರು ಮಗನ ಪರ ವಹಿಸಿಕೊಂಡು ಮಾತನಾಡಿದ್ದರು. ಇದಾದ ಬಳಿಕ ಕಾಶಿನಾಥಯ್ಯ ಅವರು ಸಾಮಾನ್ಯವಾಗಿ ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ‘ರೇಣುಕಾ ಸ್ವಾಮಿ ದರ್ಶನ್ ಭೇಟಿಗೆ ಬರಲಿ ಎಂದು ನಿರೀಕ್ಷಿಸುತ್ತಿದ್ದಾರೆ’ ಎಂದು ಕೆಲವರು ಬಿಂಬಿಸಿದ್ದರು. ಈ ಬಗ್ಗೆ ಕಾಶಿನಾಥಯ್ಯ ಅವರು ಮಾತನಾಡಿದ್ದಾರೆ.
‘ನಮ್ಮ ಭೇಟಿಗೆ ದರ್ಶನ್ ಬರಲಿ ಎಂಬ ಅರ್ಥದಲ್ಲಿ ನಾನು ಏನನ್ನೂ ಹೇಳಿಲ್ಲ. ಹೆತ್ತ ಮಗನನ್ನು ಕಳೆದುಕೊಂಡು ತುಂಬಾ ಸಂಕಟ ಆಗಿದೆ. ವಿಶಾಲ ಭಾವನೆಯಿಂದ ಯಾರು ಬಂದರೂ ಬರಲಿ ಎನ್ನುತ್ತೇವೆ. ವೈಯಕ್ತಿಕವಾಗಿ ನಟ ದರ್ಶನ್ ಬರಲಿ ಎಂದು ಹೇಳುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಕೋರ್ಟ್, ಪೊಲೀಸ್, ಸರ್ಕಾರ ಕ್ರಮ ಕೈಗೊಳ್ಳುತ್ತದೆ. ನಾವು ಕಾನೂನು ಹೋರಾಟ ನಿರಂತರವಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಈವರೆಗೆ ನಮಗೆ ನ್ಯಾಯ ದೊರಕಿಸಿ ಕೊಟ್ಟಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನಮ್ಮ ಮನವಿ. ಈ ಪ್ರಕರಣದಲ್ಲಿ ದರ್ಶನ್ ಜೊತೆ ಸಂಧಾನ ಅಸಾಧ್ಯ ಎಂದು ಖಡಕ್ ಆಗಿ ಹೇಳಿದ್ದಾರೆ.