ಮೈಸೂರು: ಅಯೋಧ್ಯೆಯಲ್ಲಿಸುತ್ತೂರಿನ ಶಾಖಾ ಮಠ ನಿರ್ಮಾಣ ಮಾಡಲು ಸ್ವಾಮೀಜಿ ತೀರ್ಮಾನ ಮಾಡಿದ್ದಾರೆ. ಇದಕ್ಕೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊಟ್ಟಮೊದಲು ಜಗದ್ಗುರು ಪೂಜ್ಯ ಸ್ವಾಮೀಜಿಯವರಿಗೆ ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಈ ಮೊದಲು 24 ಮಠಾಧೀಶರು ಈ ಮಠದಲ್ಲಿ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನೆಲ್ಲರನ್ನು ನಾನು ಸ್ಮರಿಸುತ್ತೇನೆ. ಇದರ ಜೊತೆಗೆ ಕರ್ನಾಟಕದ ಈ ಪವಿತ್ರ ಮಣ್ಣಿನಲ್ಲಿ ನಿಂತು ನಾನು ಬಸವಣ್ಣನವರನ್ನು ನೆನೆಸುತ್ತೇನೆ.
ಬಸವಣ್ಣನವರು ಕೇವಲ ಒಂದು ವರ್ಗಕ್ಕೆ ಅಲ್ಲ. ದೇಶದ ಹಾಗೂ ಜಗತ್ತಿನ ಕೋಟಿಕೋಟಿ ಜನಕ್ಕೆ ಪ್ರೇರಣೆ, ಭಕ್ತಿಯ ಭಾವನೆಯನ್ನು ತುಂಬಿದಂತಹ ಒಬ್ಬ ಮಹಾಪುರುಷರು. ಸುತ್ತೂರು ಮಠದ 24 ಮಠಾಧೀಶರು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಲಕ್ಷಾಂತರ ಜನರ ಮನಸ್ಸಲ್ಲಿ ಒಂದು ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಬಿಜೆಪಿ ಅವರ ಈ ಸೇವೆ ಹಾಗೂ ಕೊಡುಗೆಯನ್ನು ಸದಾ ಗುರುತಿಸುತ್ತದೆ ಎಂದರು.
ನಾನು ಶನಿವಾರ ಇಲ್ಲಿ ಬರುವುದಿತ್ತು. ಪಾರ್ಲಿಮೆಂಟ್ ಸಭೆಯನ್ನು ಒಂದು ದಿನ ಮುಂದೂಡಿದ್ದರಿಂದ ಇವತ್ತು ಬರಬೇಕಾಯಿತು. ಅಹಮದಾಬಾದ್ ಪ್ರವಾಸವನ್ನು ರದ್ದುಗೊಳಿಸಿದಾಗ ಅಲ್ಲಿನ ಪತ್ರಕರ್ತರು ಯಾಕೆ ಅಹಮದಾಬಾದ್ ಪ್ರವಾಸ ರದ್ದುಗೊಳಿಸಿದಿರಿ ಎಂದು ಕೇಳಿದರು. ಆಗ ನಾನು ಸುತ್ತೂರು ಮಠದ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ ಎಂದು ಉತ್ತರಿಸಿದೆ ಎಂದು ಹೇಳಿದರು.