ಬೆಂಗಳೂರು: ಮನೆ ಬಿಟ್ಟು ಪ್ರಿಯಕರನ ಜತೆ ಪರಾರಿಯಾಗಿದ್ದ ಅಪ್ರಾಪ್ತೆ ಪೋಷಕರ ಜತೆ ಮರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿಇರಿಸುವಂತೆ ಹೈಕೋರ್ಟ್, ಸರ್ಕಾರಕ್ಕೆ ಆದೇಶಿಸಿದೆ. ನಾಪತ್ತೆಯಾಗಿರುವ ತನ್ನ ಅಪ್ರಾಪ್ತ ಮಗಳನ್ನು ಪತ್ತೆಹಚ್ಚಬೇಕು ಹಾಗೂ ಆಕೆಯನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಕೋರಿ ರಾಮನಗರ ಜಿಲ್ಲೆಯ ಕಲ್ಲೂರಿನ ಸುರೇಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಅಪ್ರಾಪ್ತೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆಗ ನ್ಯಾಯಪೀಠ ಬಾಲಕಿ ಬಳಿ, ”ತಂದೆ- ತಾಯಿಯ ಜತೆಗೆ ಮರಳಿ ಮನೆಗೆ ತೆರಳುತ್ತೀಯಾ?,” ಎಂದು ಕೇಳಿತು. ಆಕೆ ಪೋಷಕರ ಜತೆ ಮರಳಲು ನಿರಾಕರಿಸಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ”ನಿಮ್ಮ ಮಗಳು ನಿಮ್ಮ ಜತೆ ಬರಲು ನಿರಾಕರಿಸುತ್ತಿದ್ದಾಳೆ,” ಎಂದು ಪೋಷಕರಿಗೆ ತಿಳಿಸಿತು.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ಹಾಗಾಗಿ, ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸಲಾಗುವುದು ಎಂದು ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು. ಅಲ್ಲದೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಕೆಯನ್ನು ಸರಕಾರದ ವಸತಿ ನಿಲಯ (ಸ್ಟೇಟ್ ಹೋಮ್) ನಲ್ಲಿಇರಿಸಲಾಗುತ್ತದೆ. ಪೋಷಕರು ಯಾವಾಗ ಬೇಕಾದರೂ ಭೇಟಿ ನೀಡಿ ಆಕೆಯ ಯೋಗಕ್ಷೇಮ ವಿಚಾರಿಸಬಹುದು. ಆದರೆ, ಆಕೆಗೆ ತಮ್ಮ ಜತೆ ಬರುವಂತೆ ಯಾವುದೇ ರೀತಿ ಒತ್ತಡ ಹೇರುವಂತಿಲ್ಲಎಂದು ನ್ಯಾಯಾಲಯ ಆದೇಶಿಸಿದೆ.
”ಯುವತಿ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ಆಕೆಗೆ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕೆಂಬ ಹಂಬಲವಿದ್ದರೆ ಅವಕಾಶ ಕಲ್ಪಿಸಬೇಕು. ಮನೋವೈದ್ಯರಿಂದ ಆಕೆಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು,” ಎಂದು ಸರಕಾರಿ ವಕೀಲರಿಗೆ ನಿರ್ದೇಶಿಸಿದೆ.