ರೋಹಿತ್ ಪಡೆ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ, ಆ ಬಳಿಕ ಮತ್ತೆ ಟ್ರೋಫಿ ಗೆದ್ದಿಲ್ಲ.
ಟೀಮ್ ಇಂಡಿಯಾ ಹಲವಾರು ಬಾರಿ ಸೆಮಿಸ್ ಮತ್ತು ಫೈನಲ್ಗೆ ಹೋದರೂ ಕಪ್ ಎತ್ತಲು ಮಾತ್ರ ಸಾಧ್ಯವಾಗಲಿಲ್ಲ. ನಿರೀಕ್ಷೆಯನ್ನು ಮುಟ್ಟಲಾಗದೆ ಒತ್ತಡಕ್ಕೆ ಮಣಿದು ಬರಿಗೈಯಲ್ಲಿ ವಾಪಸ್ ಆಗಿದೆ. ಆದರೆ ಈ ಬಾರಿ ರೋಹಿತ್ ನೇತೃತ್ವದ ತಂಡ ಪ್ರಶಸ್ತಿ ಗೆಲ್ಲಲೇಬೇಕೆಂಬ ಹಠಕ್ಕೆಬಿದ್ದಿದೆ. ಇತ್ತ 3 ದಶಕಗಳ ಬಳಿಕ ಫೈನಲ್ ತಲುಪಿರುವ ದಕ್ಷಿಣ ಆಫ್ರಿಕಾ ಕೂಡ ಇದೇ ಹಠದಲ್ಲಿದೆ.
ಉಭಯ ತಂಡಗಳು ಟ್ರೋಪಿಗಾಗಿ ಪರಸ್ಪರ ಸೆಣಸಾಟ ನಡೆಸುತ್ತಿರುವುದರಿಂದ ಕೊನೆಯ ಎಸೆತದವರೆಗೂ ಮೆಗಾ ಫೈನಲ್ ರೋಚಕವಾಗಿ ಸಾಗಬಹುದು ಎಂದು ಭಾವಿಸಲಾಗುತ್ತಿದೆ. ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಆದರೆ ಒಂದು ವಿರಾಟ್ ಕೊಹ್ಲಿಯ ಫಾರ್ಮ್ ದೊಡ್ಡ ತಲೆನೋವಾಗಿದೆ.
ಕೊಹ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಬಿಗ್ ಮ್ಯಾಚ್ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ದಾಖಲೆ ಹೊಂದಿರುವ ಕೊಹ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಮುಂದುವರಿಸಲು ವಿಫರಾಗಿದ್ದರು.
ವಿರಾಟ್ ತಮ್ಮ ಬಲಿಷ್ಠ ಟೈಮಿಂಗ್ ಅವಲಂಬಿಸದೆ ವಿಶ್ವಕಪ್ನಲ್ಲಿ ಆಕ್ರಮಣಕಾರಿ ಆಟವಾಡುತ್ತಾ, ಅನಗತ್ಯ ಹೊಡೆತಗಳನ್ನು ಬಾರಿಸುತ್ತಿರುವುದರಿಂದ ಬೇಗನೇ ಔಟಾಗುತ್ತಿದ್ದಾರೆ. ಮೈದಾನದ ಹೊರಗಿನ ಟೀಕೆಗೆ ಉತ್ತರಿಸುವ ಒತ್ತಡದಲ್ಲಿ ತಮ್ಮ ನೈಜ ಆಟವನ್ನು ಮರೆಯುತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ಹೊರಗುಳಿಯುತ್ತಾರಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಕಿಂಗ್ ಪ್ಲೇಸ್ನಲ್ಲಿ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಸಲಿ, ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿ ಎಂಬ ಸಲಹೆಗಳು ಹೊರಬೀಳುತ್ತಿವೆ
ಆದರೆ ಕೊಹ್ಲಿಯನ್ನು ಫೈನಲ್ ಪಂದ್ಯಕ್ಕೆ ಕೈಬಿಡಬಹುದಾ ಎಂಬ ಪ್ರಶ್ನೆಗೆ ಲೆಜೆಂಡ್ ಸೌರವ್ ಗಂಗೂಲಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಭಾರತೀಯ ಕ್ರಿಕೆಟ್ಗೆ ವಿರಾಟ್ ಬಹಳ ಮುಖ್ಯ ಎಂದು ದಾದಾ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರಂತೆ ಕೊಹ್ಲಿ ಕೂಡ ನಮ್ಮ ಕ್ರಿಕೆಟ್ನ ಆಧಾರ ಸ್ತಂಭವಾಗಿದ್ದಾರೆ. ಅವರನ್ನ ತಂಡದಿಂದ ಕೈಬಿಡುವ ಯೋಚನೆ ಕೂಡ ಮಾಡಬಾರದು ಎಂದು ಹೇಳಿದ್ದಾರೆ.
ಮೂರ್ನಾಲ್ಕು ಪಂದ್ಯಗಳಲ್ಲಿ ವಿಫಲರಾದರೆ ಕಳಪೆ ಆಟಗಾರರಾಗುತ್ತಾರಾ? ಕೊಹ್ಲಿ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನ ಬೇಡ ಅವರು ದೊಡ್ಡ ಪಂದ್ಯದ ಆಟಗಾರ, ಅವರನ್ನು ಅಂತಿಮ ಪಂದ್ಯದಲ್ಲಿ ಸೈಡ್ಲೈನ್ ಮಾಡುವ ಧೈರ್ಯ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ಆರಂಭದ ದಿನದಿಂದ ಪಂದ್ಯದ ಸ್ವರೂಪವನ್ನು ಏಕಾಂಗಿಯಾಗಿ ಬದಲಾಯಿಸಬಲ್ಲ ಆಟಗಾರರಾಗಿದ್ದಾರೆ. ಫೈನಲ್ನಲ್ಲೂ ಅವರು ಓಪನರ್ ಆಗಲು ಬಯಸಿದರೆ ಆಗಲಿ, ಕೊಹ್ಲಿ ಮೇಲೆ ನಂಬಿಕೆ ಇಡಲು ಶ್ರೇಷ್ಠ ಆಟಗಾರರೂ ಕೆಲವೊಮ್ಮೆ ವಿಫಲರಾಗುತ್ತಾರೆ, ಅದು ಸಾಮಾನ್ಯ ಎಂದು ದಾದಾ ಹೇಳಿದ್ದಾರೆ