ಈ ಬಾರಿಯ IPL ಸೀಸನ್ 17 ರಲ್ಲಿ RCB ಹೀನಾಯ ಪ್ರದರ್ಶನ ತೋರಿದೆ. ಆಡಿದ ಏಳು ಪಂದ್ಯಗಳಲ್ಲಿ ಆರನ್ನು ಸೋತಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮಾಜಿ ಆರ್ ಸಿಬಿ ಆಟಗಾರ ರಾಬಿನ್ ಉತ್ತಪ್ಪ ಅವರು ಇದೀಗ ಫ್ರಾಂಚೈಸಿಯ ಬಗ್ಗೆ ಮಾತನಾಡಿದ್ದಾರೆ. ತಂಡ ಕಪ್ ಗೆಲ್ಲಬೇಕಾದರೆ ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಉತ್ತಪ್ಪ ಅವರಿಗೆ ‘ಒಂದು ವೇಳೆ ನೀವು ಆರ್ ಸಿಬಿ ಮ್ಯಾನೇಜ್ ಮೆಂಟ್ ನಲ್ಲಿದ್ದರೆ ಯಾವ ಬದಲಾವಣೆ ತರುತ್ತಿದ್ದಿರಿ’ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ರಾಬ್ಬಿ, “ಮೊದಲು ಹೇಗಾದರೂ ಮಾಡಿ, ಕಾಡಿ ಬೇಡಿಯಾದರೂ ಚಾಹಲ್ ರನ್ನು ಮರಳಿ ಕರೆಸುತ್ತೇನೆ. ಸಾಧ್ಯವಾದರೆ ಹರ್ಷಲ್ ಪಟೇಲ್ ರನ್ನು ಕರೆಸುತ್ತೇನೆ” ಎಂದರು.
ಚಿನ್ನಸ್ವಾಮಿಯಂತಹ ಬ್ಯಾಟರ್ ಗಳಿಗೆ ಸಹಾಯ ನೀಡುವ ಮೈದಾನ ನಮ್ಮ ತವರು ಆಗಿರುವಾಗ ನಾವು ಬೌಲರ್ ಗಳ ಬಲ ಹೆಚ್ಚಿಸಬೇಕು. ಅಲ್ಲದೆ ಮಿಡಲ್ ಆರ್ಡರ್ ನಲ್ಲಿ ಒಳ್ಳೆಯ ಬ್ಯಾಟರ್ ಗಳನ್ನು ತರಬೇಕು” ಎಂದು ಉತ್ತಪ್ಪ ಹೇಳಿದರು.