ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಾಯಿದ್ದ ಕಿಲ್ಲರ್ ಗ್ಯಾಂಗ್ ಅನ್ನು ಗದಗ ಜಿಲ್ಲಾ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜೈಲರ್ ಶ್ರೀಕಾಂತ್, ಪ್ರಸಾದ್ ಹಾಗೂ ಪ್ರದೀಪ ಬಂಧಿತ ಆರೋಪಿಗಳಾಗಿದ್ದು, ಈ ಕಳ್ಳರು ಗದಗ, ಹಾವೇರಿ, ತುಮಕೂರು, ವಿಜಯನಗರ, ಚಿತ್ರದುರ್ಗ,
ಶಿವಮೊಗ್ಗ ಆರು ಜಿಲ್ಲೆಯ ದೇವಸ್ಥಾನಗಳು ಲೂಟಿ ಮಾಡಿದ್ದರು. ಚಿನ್ನ, ಬೆಳ್ಳಿ, ಹುಂಡಿ ದೋಚಿ ಪರಾರಿ ಆಗುತ್ತಿದ್ದರು. ಅದರಂತೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಮ್ಮ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಬನ್ನಿಕೊಪ್ಪ ಸೇರಿದಂತೆ 4 ದೇವಸ್ಥಾನಗಳು ಹಾಗೂ ಸರಗಳ್ಳತನ ಮಾಡಿ ಎಸ್ಕೇಪ್ ಆಗಿದ್ದರು.
ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಜೈಲು ವಾರ್ಡನ್ 29 ವರ್ಷದ ಶ್ರೀಕಾಂತ ಎಂಬಾತನೇ ಕಳ್ಳರ ಗ್ಯಾಂಗ್ ಲೀಡರ್ ಆಗಿದ್ದಾನೆ. 3 ಜನ ಸಹೋದರರ ಕಳ್ಳರ ಕುಟುಂಬದ ಇಬ್ಬರು ಕಳ್ಳತನ ಪ್ರಕಣದಲ್ಲಿ ಚಿತ್ರದುರ್ಗ ಜೈಲು ಪಾಲಾಗಿದ್ದರು. ಆಗ ಈ ಜೈಲ್ ವಾರ್ಡನ್ ಶ್ರೀಕಾಂತ ಬೇಲ್ ಮೇಲೆ ಬಿಡಿಸಿದ್ದನಂತೆ. ಹೊರಗೆ ಬಂದ ಕಳ್ಳರು, ಕಳ್ಳತನ ಮಾಡಿ ಈ ಜೈಲ್ ವಾರ್ಡನ್ಗೆ ತಂದು ಕೊಟ್ಟಿದ್ದಾರೆ. ಆಗಲೇ ತನ್ನ ಜವಾಬ್ದಾರಿ ಮರೆತು ಈ ಕಳ್ಳರ ಗ್ಯಾಂಗ್ ಗೆ ಲೀಡರ್ ಆಗಿದ್ದಾನಂತೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 15 ಪ್ರಕರಣಗಳಲ್ಲಿ ಖದೀಮರು ಭಾಗಿಯಾಗಿದ್ದಾರೆ. ಆರೋಪಿಗಳಿಂದ ಚಿನ್ನ, ಬೆಳ್ಳಿಯ ವಸ್ತುಗಳು, ನಗದು ಸೇರಿದಂತೆ 46 ಲಕ್ಷ ಮೊತ್ತದ ಚಿನ್ನ, ಬೆಳ್ಳಿ, ವಾಹನಗಳು ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲ ಕೃತ್ಯಕ್ಕೆ ಬಳಸಲಾದ ಕಟರ್, ಸೇರಿ ಹಲವು ವಸ್ತುಗಳು ಸೀಜ್ ಮಾಡಲಾಗಿದೆ ಅಂತ ಗದಗ ಪ್ರಭಾರ ಎಸ್ಪಿ ಅಮರನಾಥ್ ರೆಡ್ಡಿ ಹೇಳಿದ್ದಾರೆ.