ನವದೆಹಲಿ: ಉದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಪ್ರತಿಪಕ್ಷಗಳ ಕಠಿಣ ಪ್ರಶ್ನೆಗಳ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮೋದಿ 3.0 ರ ಮೊದಲ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮೇಲೆ ಕರ್ನಾಟಕ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಗಳ ತನಕ, ಅನ್ನದಾತರಿಂದ ವ್ಯಾಪಾರಿಗಳ ತನಕ, ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಂದ ಹಿಡಿದು ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸುವ ರೈಲ್ವೇ ಪ್ರಯಾಣಿಕರ ತನಕ ಅಪಾರ ನಿರೀಕ್ಷೆ ಇದೆ.
ಕೊಲ್ಲೂರು – ಧರ್ಮಸ್ಥಳ – ಕುಕ್ಕೆ ರೈಲು ಯೋಜನೆ ಸಮೀಕ್ಷೆಗೆ ಸಿಗುತ್ತಾ ಅನುಮೋದನೆ?
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ರಾಜ್ಯದ ರೈಲು ಯೋಜನೆಗಳಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಯಾಕಂದರೆ ಕರ್ನಾಟಕದ ವಿ.ಸೋಮಣ್ಣ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದಾರೆ. ಸೋಮಣ್ಣ, ಕಳೆದ ವಾರ ದಕ್ಷಿಣ ಕನ್ನಡ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜಿಲ್ಲೆಗೆ ಸಂಬಂಧಿಸಿದ ರೈಲು ಯೋಜನೆಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಬಳಿಕ ಬೆಳ್ತಂಗಡಿಯಲ್ಲಿ ಮಾತನಾಡಿದ್ದ ವಿ.ಸೋಮಣ್ಣ, ಕೊಲ್ಲೂರು- ಧರ್ಮಸ್ಥಳ- ಕುಕ್ಕೆಗೆ ಸಂಪರ್ಕ ಬೆಸೆಯುವ ರೈಲು ಯೋಜನೆ ಸಮೀಕ್ಷೆ ಕಾರ್ಯ ಆರಂಭಿಸಲಾಗುತ್ತದೆ ಎಂದಿದ್ದರು. ಹೀಗಾಗಿ ಈ ಯೋಜನೆಗೆ ಈ ಬಾರಿ ಅನುಮೋದನೆ ಸಿಗುವ ನಿರೀಕ್ಷೆ ಇದೆ.
ಬೆಂಗಳೂರು ವರ್ತುಲ ರೈಲು ಯೋಜನೆ
ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಅಭಿವೃದ್ಧಿಯ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದ ವರ್ತುಲ ರೈಲು ಯೋಜನೆ ನೀಲನಕ್ಷೆ ತಯಾರಿಸಲಾಗಿದೆ. 287 ಕಿ.ಮೀ. ಉದ್ದದ ಈ ರೈಲು ಯೋಜನೆ,ನಿಡುವಂದ-ವಡ್ಡರಹಳ್ಳಿ-ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡುವಂದ ನಿಲ್ದಾಣಗಳ ಮೂಲಕ ಬೆಂಗಳೂರು ನಗರದ ಪ್ರಮುಖ ರೇಲ್ವೇ ಕೊಂಡಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಗೆ 23,000 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜು ಇದೆ. ಕೇಂದ್ರ ಬಜೆಟ್ನಲ್ಲಿ ಅನುದಾನವನ್ನು ನೀಡುವ ನಿರೀಕ್ಷೆ ಇದೆ.
ರೈಲು ಯೋಜನೆಗಳ ನಿರೀಕ್ಷೆ
- ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ ನೀಡಲು ಅಗತ್ಯ ಅನುದಾನ.
- ಬೆಂಗಳೂರು- ಮೀರಜ್ ಮಾರ್ಗ ವಿದ್ಯುದೀಕರಣದ ನಿರೀಕ್ಷೆ.
- ಇದೇ ರೀತಿ ರಾಜ್ಯದ ಹಲವು ರೈಲು ಮಾರ್ಗಗಳ ವಿದ್ಯುದೀಕರಣ.
- ತುಮಕೂರಿನಿಂದ-ಚಿತ್ರದುರ್ಗಕ್ಕೆ ನೇರ ರೈಲು ಸಂಪರ್ಕ ಯೋಜನೆ.
- ಹುಬ್ಬಳ್ಳಿ-ಅಂಕೋಲಾ, ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ.
- ಗದಗದಿಂದ ಕಲಬುರಗಿಯ ವಾಡಿ ತನಕ ಹೊಸ ಮಾರ್ಗ ನಿರ್ಮಾಣ.
- ರೈಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಕ್ತ ಅನುದಾನ.
- ಬೆಂಗಳೂರು ಮೆಟ್ರೋದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರತಿ ಮೆಟ್ರೋ ಕಾಮಗಾರಿ ನಿಗದಿತ ಅವಧಿಗಿಂತ ತಡವಾಗಿ ಮುಕ್ತಾಯಗೊಳ್ಳುತ್ತಿದೆ. ಸದ್ಯ ಸಾಗುತ್ತಿರುವ ಏರ್ಪೋರ್ಟ್ ಲೈನ್, ಕಾಳೇನ ಅಗ್ರಹಾರ-ನಾಗವಾರ ಕಾಮಗಾರಿಗೆ ಅನುದಾನದ ಜತೆಗೆ ಮೆಟ್ರೋ ಹಂತ-3ರ ಯೋಜನೆಗೆ 15 ಸಾವಿರ ಕೋಟಿ ರೂಪಾಯಿ ಅನುದಾನದ ಬಗ್ಗೆ ಪ್ರಸ್ತಾಪಿಸುವ ನಿರೀಕ್ಷೆ ಇದೆ.
ಮೇಕೆದಾಟು, ಕಳಸಾ, ಎತ್ತಿನಹೊಳೆ ಯೋಜನೆಗಳ ಬಗ್ಗೆ ಪ್ರಸ್ತಾಪ ಆಗುತ್ತಾ, ಕಿಸಾನ್ ನಿಧಿ ಹೆಚ್ಚಳವಾಗುತ್ತಾ? ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್ ಸಿಗಬಹುದೇ ಎಂಬ ಪ್ರಶ್ನೆಗಳು ಕರ್ನಾಟಕದ ಜನತೆಯ ಮನಸಲ್ಲಿವೆ. ಜತೆಗೆ ಸಿರಿಧಾನ್ಯ ಬಳಕೆಗೆ ಪ್ರೋತ್ಸಾಹ ಸಿಕ್ಕರೆ ಕರ್ನಾಟಕದ ರೈತರಿಗೆ ಬಂಪರ್ ಸಿಗಲಿದೆ. ಇದರ ಜೊತೆಗೆ ಹೊಟೇಲ್ ಉದ್ಯಮಿಗಳಿಗೆ ತೆರಿಗೆ ಹೊರೆ ಇಳಿಸುವ ನಿರೀಕ್ಷೆ ಇದೆ.
ಸೀತಾರಾಮನ್ ಅವರು ತಮ್ಮ ಏಳನೇ ಕೇಂದ್ರ ಬಜೆಟ್ ಮಂಡನೆಯಲ್ಲಿ, ಹೊಸ ಉತ್ಪಾದನಾ ಸೌಲಭ್ಯಗಳಿಗೆ ತೆರಿಗೆ ಪ್ರೋತ್ಸಾಹವನ್ನು ನೀಡುವ ಸಾಧ್ಯತೆಯಿದೆ. ಉದ್ಯೋಗಗಳನ್ನು ಸೃಷ್ಟಿಸಲು ಕ್ಷೇತ್ರಗಳಾದ್ಯಂತ ಸ್ಥಳೀಯ ಸಂಗ್ರಹಣೆಯನ್ನು ಉತ್ತೇಜಿಸುವ ಸಾಧ್ಯತೆಯಿದೆ