ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಮನೆಗಳ ಮೇಲೆದಾಳಿ ಮುಂದುವರೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿನ್ನೆಯಿಂದ ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ರಾಮ್ಕಿ ಅಪಾರ್ಟ್ ಮೆಂಟ್ ನ ನಿವಾಸದಲ್ಲಿ ಮೊಕ್ಕಂ ಹೂಡಿರುವ ಅಧಿಕಾರಿಗಳು ನಾಗೇಂದ್ರ ಬಳಸುತ್ತಿದ್ದ ಮೊಬೈಲ್ ಹಾಗೂ ಕಂಪ್ಯೂಟರ್ ನಲ್ಲಿನ ಡೇಟಾ ಸೇರಿ ಇನ್ನಿತರ ಡಿಜಿಟಲ್ ಸಾಕ್ಷ್ಯಾಧಾರಗಳು ಹಾಗೂ ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆದು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ.
ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ ಒಂದು ತಿಂಗಳು: ತನಿಖೆ ಯಾವ ಹಂತದಲ್ಲಿದೆ, ಇಲ್ಲಿದೆ ಫುಲ್ ಅಪ್ ಡೇಟ್!
ಇನ್ನೊಂದೆಡೆ ನಾಗೇಂದ್ರ ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್ ಖಾತೆದಾರರಾಗಿರಾಗಿದ್ದು, ಕಳೆದ ಆರು ತಿಂಗಳಿಂದ ಹಣ ವರ್ಗಾವಣೆ ಮಾಹಿತಿಗಳನ್ನ ತರಿಸಿಕೊಂಡು ಸಿಕ್ಕಿರುವ ದಾಖಲಾತಿ ಪತ್ರಗಳಿಗೂ ತುಲನೆ ಮಾಡುತ್ತಿದ್ದಾರೆ. ಹಣದ ಮೂಲದ ಬಗ್ಗೆ ಮಾಜಿ ಸಚಿವರನ್ನ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಪ್ರಕರಣದಲ್ಲಿ ನಾಗೇಂದ್ರ ಪ್ಲ್ಯಾಟ್ ನಲ್ಲಿದ್ದ ಇಬ್ಬರನ್ನ ಇ.ಡಿ.ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ದಿದ್ದಾರೆ. ಇವರ ಪಾತ್ರದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಮತ್ತೊಂದೆಡೆ ಬಸವನಗೌಡ ದದ್ದಲ್ ಸೇರಿ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ರಾಯಚೂರಿನಲ್ಲಿ ದದ್ದಲ್ ಪಿಎ ಆಗಿದ್ದ ಪಂಪಣ್ಣನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಬೆಂಗಳೂರು, ರಾಯಚೂರು ಹಾಗೂ ಬಳ್ಳಾರಿ ಸೇರಿದಂತೆ 18 ಕಡೆಗಳಲ್ಲಿ ದಾಳಿ ನಡೆಸಿದ್ದರು.
ಇನ್ನೊಂದೆಡೆ ನಾಗೇಂದ್ರ ಹಾಗೂ ದದ್ದಲ್ ಅವರನ್ನ ವಿಚಾರಣೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೀಡಿರುವ ನೊಟೀಸ್ ಗೆ ಇಂದು ಸಹ ಗೈರಾಗುವುದು ದಟ್ಟವಾಗಿದೆ. ಇ.ಡಿ. ದಾಳಿಗೆ ಒಳಗಾಗಿರುವುದರಿಂದ ಎಸ್ಐಟಿ ವಿಚಾರಣೆ ಬರುವುದು ಅಸಾಧ್ಯವಾಗಿದೆ. ಹೀಗಾಗಿ ಇ.ಡಿ. ದಾಳಿ ಬೆಳವಣಿಗೆ ನೋಡಿಕೊಂಡು ನೊಟೀಸ್ ನೀಡುವ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.