ಹಾವೇರಿ: ದಿಢೀರ್ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ದೊಡ್ಡ ಆಘಾತ ತಂದಿದೆ. ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದು ಇದೇ ಮೊದಲು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದು ಇದೇ ಮೊದಲು. ಇದೊಂದು ರಾಬರಿ. ಸರ್ಕಾರದ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ. ಸಾರ್ವಜನಿಕರು ಇದರ ವಿರುದ್ಧ ಪ್ರತಿಭಟನೆ ಮಾಡಬೇಕು. ಬೆಲೆ ಏರಿಕೆ ಮಾಡಿದ್ದು ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.
ಒಂದು ವರ್ಷದಿಂದ ಹಾಲಿನ ಪ್ರೋತ್ಸಾಹಧನ ಬಂದಿಲ್ಲ. ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಈಗ ಎರಡು ರೂಪಾಯಿ ಹಾಲಿನ ದರ ಕಡಿಮೆ ಮಾಡಿದ್ದಾರೆ. ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಮಾಜಿ ಸಚಿವರು ವಾಗ್ದಾಳಿ ನಡೆಸಿದರು. ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಟ್ಟರೆ ವಿಚಾರ ಮಾಡೋಣ. ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಆಗಿದ್ದೆ. ಕೊಟ್ಟಿದ್ದರೆ ಗೆಲ್ಲುತ್ತಿದ್ದೆ.
ವಿಧಾನಸಭೆ ಚುನಾವಣೆ ಹತ್ತಿರದಿಂದ ಇದ್ದವರು ನಿಲ್ಲುವುದು ಒಳ್ಳೆಯದು. ನಾನು ಹೋಗಿ ಅಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂಬುದು ಸರಿಯಲ್ಲ. ಸ್ಥಳೀಯರು, ಅಲ್ಲಿ ಕಷ್ಟಪಟ್ಟವರಿಗೆ ಟಿಕೆಟ್ ಕೊಡಬೇಕು. ಪಕ್ಷ ಸೂಚಿಸಿದರೂ ಬೇಡ ಎನ್ನುತ್ತೇನೆ. ಅಲ್ಲಿ ಹೋಗಿ ನಿಲ್ಲುವುದು ಕಷ್ಟಸಾಧ್ಯ. ಹರಕೆಯ ಕುರಿಯಾಗಬಹುದು ಎಂದು ಪಾಟೀಲ್ ತಿಳಿಸಿದರು.
ಸರ್ಕಾರ ಬೀಳುವುದು ಈಗಿಂದ ಆಟ ಶುರುವಾಗುತ್ತದೆ. ಎಲ್ಲದರ ದರ ಹೆಚ್ಚಿಸಿದ್ದಾರೆ. ಜನರು ತಿರಸ್ಕಾರ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅವರೇ ಗೌರವಾನ್ವಿತವಾಗಿ ರಾಜೀನಾಮೆ ಕೊಟ್ಟು ಹೋಗಬೇಕು. ಈ ಸರ್ಕಾರ ಬಂದರೆ ಬರಗಾಲ ಗ್ಯಾರಂಟಿ. ಕೊಲೆ, ಸುಲಿಗೆ ಪ್ರಕರಣಗಳು ಗ್ಯಾರಂಟಿ ಎಂದು ಹರಿಹಾಯ್ದರು.