ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಮಂಡ್ಯ ಜಿಲ್ಲೆಗೆ ಪ್ರಥಮ ಭೇಟಿ ನೀಡಿದ ಎಚ್ಡಿ ಕುಮಾರಸ್ವಾಮಿ ನಗರದ ಖಾಸಗಿ ಹೋಟೇಲ್ನಲ್ಲಿ ಮೈತ್ರಿ ಪಕ್ಷಗಳ ಸಮನ್ವಯ ಸಭೆ ನಡೆಸಿ ಮಾತನಾಡಿದರು.ಸಂಸತ್ ಚುನಾವಣೆ ನಂತರ ಮುಂದಿನ ಡಿಸೆಂಬರ್ನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಕಾಂಗ್ರೆಸಿಗರೇ ಅವರ ಸರ್ಕಾರ ಪತನಕ್ಕೆ ಕಾರಣರಾಗಲಿದ್ದಾರೆ. ಇದು ಆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ. ಆದರೆ, ಜನಸಾಮಾನ್ಯರ ಅರಿವಿಗೆ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರದ ಸಂದರ್ಭ ನಾನು ಅಧಿಕಾರ ಹಸ್ತಾಂತರ ಮಾಡಲಿಲ್ಲ ಅನ್ನೋ ಕೆಟ್ಟ ಅಭಿಪ್ರಾಯ ಇಂದಿಗೂ ಇದೆ, ಆದರೆ, ಅವತ್ತು ನನ್ನದಲ್ಲದ ತಪ್ಪಿಗೆ ಕೆಲವು ಕಾಣದ ಕೈಗಳ ಸಂಚಿನಿಂದ, ನಾನು ತಪ್ಪಿನ ಹೊಣೆ ಹೊರಬೇಕಾಯಿತು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅವರ ನಡವಳಿಕೆ ನೋಡಿದ್ದೇನೆ, ಮೇಕೆದಾಟು ವಿಚಾರ ಹೇಳಿಕೊಂಡು ಮತ ಪಡೆಯುವ ದಾರಿದ್ರ್ಯ ಜೆಡಿಎಸ್ ಪಕ್ಷ ಹಾಗೂ ದೇವೇಗೌಡರಿಗೆ ಅಗತ್ಯವಿಲ್ಲ. ಬಿರಿಯಾನಿ ಊಟ ಮಾಡಿಕೊಂಡು ಪಾದಯಾತ್ರೆ ಮಾಡಿದ್ರೆ ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಲ್ಲ ಎಂದು ಛೇಡಿಸಿದರು.
ಸುಳ್ಳು ಹೇಳುವುದು ಪ್ರಧಾನಿ ನರೇಂದ್ರ ಮೋದಿ ಅವ್ರರಲ್ಲ ಕಾಂಗ್ರೆಸ್ ನವರು, ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ರುವ ಕಾನೂನು ಅರಿತು ಮಾತನಾಡಬೇಕು. ನಮ್ಮ ತೆರಿಗೆ ನಮ್ಮ ಹಕ್ಕು ಎಂದರೆ ಆಗಲ್ಲ. ಮಂಡ್ಯ ಮೇಲೆ ಕೆಟ್ಟ ದೃಷ್ಟಿ ಬೇಡ ಎಂದು ಹಳೇ ಸ್ನೇಹಿತ ಹೇಳಿದ್ದಾನೆ. ನಮ್ಮ ದೃಷ್ಟಿ ಇದ್ದಾಗ ಜಿಲ್ಲೆಯಲ್ಲಿ ಮಳೆ- ಬೆಳೆ ಚೆನ್ನಾಗಿ ಆಗ್ತಿತ್ತು. ನಿಮ್ಮ ದೃಷ್ಟಿ ಬಿದ್ದ ಮೇಲೆ ಬರಗಾಲ ಬಂದಿದೆ ಎಂದು ವ್ಯಂಗ್ಯವಾಡಿದರು.