ಶಿವಮೊಗ್ಗ: 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ (bg krishnamurthy) 2021 ರ ಡಿಸೆಂಬರ್ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.ಇದೀಗ ಅವರನ್ನ ಶಿವಮೊಗ್ಗ ಜಿಲ್ಲೆಯ ಪೊಲೀಸರು ಬಾಡಿ ವಾರಂಟ್ ಮೇಲೆ ಶಿವಮೊಗ್ಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಇವತ್ತು ಬಿಜಿಕೆ ಶಿವಮೊಗ್ಗ ಜಿಲ್ಲೆಗೆ ಬರಲಿದ್ದು ಪ್ರಕ್ರಿಯೆಗಳು ಮುಗಿದ ಬಳಿಕ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ.
ತೀರ್ಥಹಳ್ಳಿ ಪೊಲೀಸರ ತಂಡವೊಂದು ಈ ಸಂಬಂಧ ಕೇರಳ ಪೊಲೀಸರ ಮೂಲಕ ಬಾಡಿವಾರಂಟ್ ಮೇಲೆ ಬಿ.ಜಿ.ಕೃಷ್ಣಮೂರ್ತಿ ಯವರನ್ನ ಕರೆದುಕೊಂಡು ಬರಲು ನಿನ್ನೆಯೆ ಎಎನ್ಎಫ್ ಟೀಂನ ಜೊತೆಗೆ ತೆರಳಿತ್ತು. ನಕ್ಸಲ್ ಬಿಜಿ ಕೃಷ್ಣಮೂರ್ತಿ ವಿರುದ್ಧ ಚಿಕ್ಕಮಗಳೂರು , ಉಡುಪಿ ಹಾಗೂ ಶಿವಮೊಗ್ಗದಲ್ಲಿ ಕೇಸ್ಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ಈಗಾಗಲೇ ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬಿಜಿಕೆಯನ್ನು ಕೋರ್ಟ್ಗೆ ಹಾಜರುಪಡಿಸಿವೆ.
ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸರು ಹಾಜರುಪಡಿಸುತ್ತಿದ್ದಾರೆ. ವಿಶೇಷ ಅಂದರೆ ಎಲ್ಎಲ್ಬಿ ಓದಿರುವ ಬಿಜಿಕೆ ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದಾನೆ. ಆಗುಂಬೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿನ ತಲ್ಲೂರು ಅಂಗಡಿ ಬಸ್ ಸುಟ್ಟ ಪ್ರಕರಣವೂ ಸೇರಿದಂತೆ ಬಿಜಿಕೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಬಿ.ಜಿ.ಕೃಷ್ಣಮೂರ್ತಿಯನ್ನ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನೂ ಈ ವಿಚಾರವನ್ನ ಗೌಪ್ಯವಾಗಿ ಇಡಲಾಗಿದ್ದು, ಯಾವ್ಯಾವ ಕೇಸ್ಗಳ ಅಡಿಯಲ್ಲಿ ಹಾಜರುಪಡಿಸಲಾಗುತ್ತಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.