ಬೆಂಗಳೂರು: ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗಳ ಬೃಹತ್ ಗೆಲುವು ದಾಖಲಿಸಿ ಟಾಪ್ 1 ತಂಡವಾಗಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಅವಕಾಶ ಕೈಚೆಲ್ಲಲಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಭಾನುವಾರ ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ (101* ರನ್) ಶತಕ ಹಾಗೂ ಶ್ರೇಯಸ್ ಅಯ್ಯರ್ (77 ರನ್) ಅರ್ಧ ಶತಕ ನೆರವಿನಿಂದ 50 ಓವರ್ ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತ್ತು.
ಪಾಕಿಸ್ತಾನ ತಂಡದ ಸಹ ಆಟಗಾರ ಶೋಯಿಬ್ ಮಲಿಕ್ ರೊಂದಿಗೆ ಎ ಸ್ಪೋರ್ಟ್ಸ್ ಗಾಗಿ ನಡೆಸಿರುವ ಸಂಭಾಷಣೆಯಲ್ಲಿ ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾ ಸೋಲು ಕಾಣಲಿದೆ ಎಂದು ಮಿಸ್ಬಾ ಉಲ್ ಹಕ್ ಎಚ್ಚರಿಕೆ ನೀಡಿದ್ದಾರೆ.
“ಒಂದು ಸಂಗತಿ ಮಾತ್ರ ಖಚಿತವಾಗಿದೆ. ಇದು ಗುಂಪು ಹಂತದ ಪಂದ್ಯವಾಗಿದ್ದು, ಒಂದು ಪಂದ್ಯದ ಸೋಲು ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ನಾಕೌಟ್ ಹಂತದಲ್ಲಿ ಪ್ರತಿಯೊಂದು ತಂಡವು ಪ್ರಬಲ ಪೈಪೋಟಿ ನೀಡುವ ಮೂಲಕ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿರುತ್ತವೆ. ಆದರ ಜೊತೆಗೆ ಒತ್ತಡವೂ ಕೂಡ ಹೆಚ್ಚಾಗಿರುತ್ತದೆ. ಪಂದ್ಯದಲ್ಲಿ 1 ಅಥವಾ 2 ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ತಂಡದ ಮೇಲೆ ಒತ್ತಡ ಹೇರಿದರೆ ಟೀಮ್ ಇಂಡಿಯಾ ಸೋಲಿನ ಸುಳಿಗೆ ಸಿಲುಕುತ್ತದೆ. ಆಗ ಉಳಿದ ತಂಡಗಳಿಗೆ ಪಂದ್ಯ ಗೆಲ್ಲುವ ಅವಕಾಶ ದೊರೆಯುತ್ತದೆ,” ಎಂದು ಪಾಕ್ ನ ಮಾಜಿ ಹೆಡ್ ಕೋಚ್ ಹೇಳಿದ್ದಾರೆ.