ಬರೋಬ್ಬರಿ ಎರಡು ದಶಕಗಳ ಕ್ರಿಕೆಟ್ ವೃತ್ತಿಬದುಕಿಗೆ ಸ್ಟಾರ್ ಓಪನರ್ ಶಿಖರ್ ಧವನ್ ಅಂತ್ಯಹಾಡಿದ್ದಾರೆ. ಆಗಸ್ಟ್ 24ರಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡ ಗಬ್ಬರ್ ಖ್ಯಾತಿಯ ಅನುಭವಿ ಆಟಗಾರ ಅಂತಾರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ ಎಲ್ಲದಕ್ಕೂ ಗುಡ್ ಬೈ ಹೇಳಿದರು. ಈ ಬಗ್ಗೆ ವಿಶೇಷ ಸಂದೇಶ ಬರೆದಿರುವ ಭಾರತ ತಂಡದ ದಿಗ್ಗಜ ಆಲ್ರೌಂಡರ್ ಯುವರಾಜ್ ಸಿಂಗ್, ಕ್ರಿಕೆಟ್ನಿಂದ ಸನ್ಯಾಸತ್ವ ತೆಗೆದುಕೊಂಡಿರುವ ಶಿಖರ್ ಧವನ್ಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆಡುವಂತೆ ಆಹ್ವಾನ ನೀಡಿದ್ದಾರೆ.
2004ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿ ಮೂಲಕ ಬೆಳಕಿಗೆ ಬಂದ ಪ್ರತಿಭೆ ಶಿಖರ್ ಧವನ್, ಇದಾದ 6 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿಕೆಟ್ ಪಡೆದುಕೊಂಡರು. 2022ರಲ್ಲಿ ಭಾರತ ತಂಡದ ಪರ ಕೊನೇ ಒಡಿಐ ಪಂದ್ಯವನ್ನು ಆಡಿರುವ ಶಿಖರ್ ಧವನ್ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಭಾರಿ ಕುತೂಹಲ ಮೂಡಿದೆ.
“ಜಾಟ್ ಜೀ, ಅದ್ಭುತ ವೃತ್ತಿಬದುಕಿಗೆ ಧನ್ಯವಾದಗಳು. ನಿಮ್ಮಂತಹ ಅದ್ಭುತ ವ್ಯಕ್ತಿಯೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಂಡಿರುವುದು ಅತ್ಯಂತ ಹಿತಕರ ಸಂಗತಿಯಾಗಿದೆ. ಸಿಕ್ಕ ಅವಕಾಶಗಳನ್ನು ಸದಾ ಅದ್ಭುತವಾಗಿ ಬೆಳೆಸಿಕೊಂಡಿದ್ದೀರಿ. ಆನ್ ಫೀಲ್ಡ್ನಲ್ಲಿ ತಂಡದ ಸಲುವಾಗಿ ಶೇ. 100ಕ್ಕೂ ಹೆಚ್ಚಿನ ಶ್ರಮವಹಿಸಿ ಆಡಿದ್ದೀರಿ. ನಿಮ್ಮ ಆ ಭಯಮುಕ್ತ ಬ್ಯಾಟಿಂಗ್ ಪ್ರದರ್ಶನಗಳು, ಅದರಲ್ಲೂ ಐಸಿಸಿ ಟೂರ್ನಿಗಳಲ್ಲಿನ ಮ್ಯಾಚ್ ವಿನಿಂಗ್ ಪ್ರದರ್ಶನಗಳನ್ನು ಎಷ್ಟು ಹೊಗಳಿದರೂ ಸಾಲದು. ವೃತ್ತಿಬದುಕಿನುದ್ದಕ್ಕೂ ಹಲವು ಅದ್ಭುತ ಸಾಧನೆಗಳನ್ನು ಮೆರೆದಿದ್ದೀರಿ. ಈಗ ನಿವೃತ್ತಿ ನಂತರದ ಜೀವನಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ. ಸಹೋದರ ಇನ್ನು ಲೆಜೆಂಡ್ಸ್ ಕ್ರಿಕೆಟ್ ಆಡುವ ಸಮಯ ಬಂದಾಗಿದೆ, ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ,” ಎಂದು ಯುವರಾಜ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ವಾಲ್ ಮೇಲೆ ಬರೆದಿದ್ದಾರೆ.