ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದ್ದರೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನು ಕುಣಿಕೆ ಬಿಗಿಯುತ್ತಿದ್ದರೂ, ಭ್ರಷ್ಟ ಹಗರಣಗಳ ಕುರಿತು ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪು, ಆದೇಶಗಳನ್ನು ಪ್ರಕಟಿಸುತ್ತಿದ್ದರೂ ನೀವು, ನಿಮ್ಮ ಕಾಂಗ್ರೆಸ್ ‘ಲಜ್ಜೆಗೆಟ್ಟಂತೆ ನಡೆದುಕೊಳ್ಳುತ್ತಿರುವ ನಡೆ’ ದೇಶದ ಇತಿಹಾಸದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ಧರಾಮಯ್ಯ ಅವರನ್ನು ಭಂಡತನದ ಬಂಡೆ ಎಂದು ವ್ಯಂಗ್ಯವಾಡಿದ್ದಾರೆ. ನೈತಿಕತೆಯನ್ನು ಗಾಳಿಗೆ ತೂರಿ ಭಂಡತನದ ಬಂಡೆಯಾಗಿರುವ ಸಿದ್ದರಾಮಯ್ಯ ನವರೇ, ದೂರು ನೀಡಲಾಯಿತು, ರಾಜ್ಯಪಾಲರು ಅನುಮತಿಯನ್ನೂ ಕೊಟ್ಟಾಯಿತು. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿದ್ದಕ್ಕೆ ಘನ ಉಚ್ಚ ನ್ಯಾಯಾಲಯವು ತೀರ್ಪು ನೀಡಿ ನೀವು ತನಿಖೆ ಎದುರಿಸುವುದಕ್ಕೆ ಆಧಾರಗಳಿವೆ ಎಂದು ಹೇಳಿಯಾಯಿತು.
ಮಾಡ ಹಾಗಲಕಾಯಿ ಬಗ್ಗೆ ಗೊತ್ತಾ.? ಇದರ ಅದ್ಭುತ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ..?
ಜನಪ್ರತಿನಿಧಿಗಳ ನ್ಯಾಯಾಲಯ ನೀವು ಆರೋಪಿ ಎಂದು ಪರಿಗಣಿಸಿ ಕ್ರಿಮಿನಲ್ ಅಪರಾಧಗಳ FIR ದಾಖಲಿಸುವಂತೆ ಲೋಕಾಯುಕ್ತಕ್ಕೆ ಸೂಚಿಸಿಯೂ ಆಯಿತು. ಲೋಕಾಯುಕ್ತ A1 ಆರೋಪಿ ಎಂದು FIR ದಾಖಲಿಸಿಯೂ ಆಯಿತು. ಕಳಂಕ ಹೊತ್ತ ನೀವು ಇನ್ನೂ ಎಲ್ಲಿಯ ತನಕ ಮುಖ್ಯಮಂತ್ರಿ ಸ್ಥಾನದ ಗೌರವ ಹಾಗೂ ಘನತೆಗೆ ಮಸಿಬಳಿದು ಕುಳಿತುಕೊಳ್ಳುವ ಉದ್ದೇಶ ಹೊಂದಿರುವಿರಿ ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಿಬಿಡಿ ಎಂದು ಆಗ್ರಹಿಸಿದ್ದಾರೆ.