ನವದೆಹಲಿ: ಪಾಕ್ ತಂಡದ ನಾಯಕ ಬಾಬರ್ ಅಜಂ ಕಳಪೆ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಬಾರಿಯ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲಿ ಸತತ ಎರಡು ಸೋಲಿನ ಬಳಿಕ ಕೆನಡಾ ಹಾಗೂ ಐರ್ಲೆಂಡ್ ಎದುರು ಗೆಲುವು ದಾಖಲಿಸಲಷ್ಟೇ ಶಕ್ತವಾಯಿತು. ಈ ಮೂಲಕ 5 ತಂಡಗಳ ‘ಎ’ ಗುಂಪಿನಲ್ಲಿ 4 ಅಂಕಗಳ ಸಹಿತ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇನ್ನು ಪಾಕಿಸ್ತಾನ ನಾಯಕ ಬಾಬರ್ ಅಜಂ, ಬ್ಯಾಟಿಂಗ್ನಲ್ಲೂ ಮಿಂಚಲು ವಿಫಲವಾಗಿದ್ದರು. ಗ್ರೂಪ್ ಹಂತದಲ್ಲಿ ಬಾಬರ್ ಅಜಂ 101.66ರ ಸ್ಟ್ರೈಕ್ರೇಟ್ನಲ್ಲಿ ಕೇವಲ 122 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಪಾಕ್ ನಾಯಕ ಬಾಬರ್ ಅಜಂ ಬಗ್ಗೆ ಅಸಮಾಧಾನ ಹೊರಹಾಕಿರುವ ವಿರೇಂದ್ರ ಸೆಹ್ವಾಗ್, ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಾಬರ್ ಅಜಂ ಮೇಲೆ ಕ್ರಮ ಕೈಗೊಳ್ಳುತ್ತದೆಯೆಂದರೆ, ನನ್ನ ಪ್ರಕಾರ ಆತನನ್ನು ನಾಯಕತ್ವದಿಂದ ಕೆಳಗಿಳಿಸುವುದು ಮಾತ್ರವಲ್ಲದೇ, ಆತನಿಗೆ ಟಿ20 ತಂಡದ ಆಯ್ಕೆಗೂ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
Masala Peanuts: ಬೇಕರಿಯಲ್ಲಿ ಸಿಗುವ ಮಸಾಲಾ ಶೇಂಗಾ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ
“ನಾಯಕನಾಗಿ ಒಬ್ಬನನ್ನು ಆಯ್ಕೆ ಮಾಡಬೇಕು ಎಂದರೆ ಅದರಿಂದ ತಂಡಕ್ಕೆ ಆತನಿಂದ ಉಪಯೋಗವಾಗುತ್ತಿದೆಯೇ ಎನ್ನುವುದನ್ನು ಮೊದಲು ಆಲೋಚಿಸಬೇಕು. ಒಂದು ವೇಳೆ ಆತ ಸೂಕ್ತವಲ್ಲ ಎಂದಾದರೇ, ಆತನಿಗೆ ಹಿಂಬಡ್ತಿ ನೀಡಿ ಆತನ ಬದಲಿಗೆ ದೊಡ್ಡ ಹೊಡೆತ ಬಾರಿಸುವ ಬೇರೆ ಆಟಗಾರನನ್ನು ಕಣಕ್ಕಿಳಿಸಿದರೆ ತಂಡಕ್ಕೆ 50-60 ರನ್ ಕೊಡುಗೆ ಸಿಗಲಿದೆ. ನಾನು ಹೇಳುವುದು ಕಠಿಣ ಎನಿಸಬಹುದು. ಒಂದು ವೇಳೆ ನಾಯಕನಾಗಿ ಬಾಬರ್ ಅಜಂ ಅವರನ್ನು ಕೆಳಗಿಳಿಸಿದರೆ, ನನ್ನ ಪ್ರಕಾರ ಆತ ಟಿ20 ತಂಡದಲ್ಲಿರಲು ಯೋಗ್ಯನಲ್ಲ. ಆತನ ಪ್ರದರ್ಶನ ಈಗಿನ ಟಿ20 ಕ್ರಿಕೆಟ್ಗೆ ಹೊಂದಿಕೆಯಾಗುವಂತಿಲ್ಲ” ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.