ಶಿವಮೊಗ್ಗ:- ಯಡಿಯೂರಪ್ಪ ಯುವಕರನ್ನು ತುಳಿಯುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ವಿಜಯೇಂದ್ರ ಕ್ಷೇತ್ರ ಶಿಕಾರಿಪುರದಲ್ಲಿ ನಿಂತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅವರು ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ, ಯುವಕರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಅವರೇ ನನಗೆ ಏಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರನ್ನು ಕುರಿಗಳ ರೀತಿ ಅಂದುಕೊಂಡಿದ್ದಾರೆ. ಅಪ್ಪ-ಮಕ್ಕಳು ಬೇಡವೆಂದು ಶಿಕಾರಿಪುರದ ಜನ ತೀರ್ಮಾನಿಸಿದ್ದಾರೆ. ರಾಘವೇಂದ್ರ ಸೋಲಿಸುವ ಮೂಲಕ ಅವರಿಗೆ ಬುದ್ಧಿ ಕಲಿಸಬೇಕು. ಸೋಲಿನ ರುಚಿ ಏನು ಅಂತಾ ಯಡಿಯೂರಪ್ಪಗೆ ತೋರಿಸಬೇಕು ಎಂದರು.
ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿವೈ ರಾಘವೇಂದ್ರ ವಿರುದ್ಧ ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಘವೇಂದ್ರ ಗೆಲ್ಲಬೇಕು ಅಂತಾ ಶಿವಮೊಗ್ಗದಲ್ಲಿ ಡಮ್ಮಿ ಕ್ಯಾಂಡಿಡೇಟು ಹಾಕಿಕೊಂಡಿದ್ದಾರೆ ಅಂತಾ ಜನ ಮಾತನಾಡುತ್ತಿದ್ದಾರೆ ಎಂದರು.
ನರೇಂದ್ರ ಮೋದಿ ಯುವಕರು ಬೆಳೆಯಬೇಕು ಅಂತಾ ಹೇಳುತ್ತಾರೆ. ಆದರೆ ಯುವಕರನ್ನು ತುಳಿಯುವುದೇ ಯಡಿಯೂರಪ್ಪ ಕೆಲಸ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಕೆಜೆಪಿ ಕಟ್ಟಿ ಕೇವಲ 6 ಸೀಟ್ ಗೆದ್ದರು. ಕೇಂದ್ರದವರಿಗೆ ಯಡಿಯೂರಪ್ಪ ಒಬ್ಬರೇ ಲಿಂಗಾಯತ ನಾಯಕರಾ? ಎಂದು ಪ್ರಶ್ನಿಸಿದರು.