ಚೆನ್ನೈ: 100 ಪರ್ಸೆಂಟ್ ಈ ಸಲ ಕಪ್ ನಮ್ದೆ ಎಂದು ಕ್ರಿಕೆಟ್ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ತಂಡದ ಬಗ್ಗೆ ನಟ ರಜನಿಕಾಂತ್ ಭರವಸೆಯ ಮಾತುಗಳನ್ನಾಡಿದ್ದಾರೆ.
ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ವೀರೋಚಿತ ಜಯ ಸಾಧಿಸಿತು. ಈ ಪಂದ್ಯಕ್ಕೆ ಖ್ಯಾತ ನಟ ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದರು. ಪಂದ್ಯ ವೀಕ್ಷಿಸಿ ಭಾರತ ತಂಡದ ಆಟಗಾರರನ್ನು ಬೆಂಬಲಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆಟಗಾರರ ಉತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಲೈವಾ, ಮೊದಲು ನಾನು ಸ್ವಲ್ಪ ಟೆನ್ಶನ್ ಆದೆ. ಎರಡು ಮತ್ತು ಮೂರು ವಿಕೆಟ್ಗಳ (ನ್ಯೂಜಿಲೆಂಡ್) ನಂತರ ಒಂದೂವರೆ ಗಂಟೆ ಪಂದ್ಯ ಸ್ವಲ್ಪ ರೋಚಕವಾಗಿತ್ತು. ಆದರೆ 100 ಪರ್ಸೆಂಟ್ ಕಪ್ ನಮ್ಮದು. 100 ಪರ್ಸೆಂಟ್ ಸೆಮಿಫೈನಲ್ ಗೆಲುವಿಗೆ ಅವರೇ (ಮೊಹಮ್ಮದ್ ಶಮಿ) ಕಾರಣ ಎಂದು ಬಣ್ಣಿಸಿದ್ದಾರೆ.
ಮೊಹಮ್ಮದ್ ಶಮಿ ಬೆಂಕಿ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 70 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಅಷ್ಟೇ ಅಲ್ಲದೇ 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 50 ಓವರ್ಗಳಲ್ಲಿ 397 ರನ್ ಕಲೆಹಾಕಿತ್ತು. 398 ರನ್ಗಳ ಗುರಿ ಬೆನ್ನತ್ತಿದ್ದ ಕಿವೀಸ್ 48.5 ಓವರ್ಗಳಲ್ಲೇ 327 ರನ್ ಗಳಿಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್ ಪ್ರವೇಶಿಸಿತು.