ದೊಡ್ಡಬಳ್ಳಾಪುರ: ಗಂಡ ಹೆಂಡತಿಯ ಸಂಬಂಧ ಏಳೇಳು ಜನ್ಮದ್ದು ಎನ್ನುತ್ತಾರೆ. ಆದರೆ ಇಲ್ಲೊಬ್ಬ ನತದೃಷ್ಠೆಯ ಹಣೆ ಬರಹ ಮಾತ್ರ ಕರುಣಾಜನಕ. ೮ ವರ್ಷ ಮಗು ಇದ್ದಾಗಲೇ ಪೋಷಕರನ್ನು ಕಳೆದುಕೊಂಡು ಸಂಬಂಧಿಗಳ ಮನೆಯಲ್ಲಿ ಬೆಳೆದು, ಕಷ್ಟದ ಸುಳಿಯಲ್ಲೇ ಇದ್ದ ಹುಡುಗಿ, ಮದುವೆ ಆಗಿ ಗಂಡನ ಜೊತೆಯಲ್ಲಿ ಸುಖವಾಗಿ ಬಾಳುತ್ತೇನೆ ಎಂದು ಬಂದು, ಈಗ ಗಂಡನಿಂದಲೇ ಕೊಲೆಯಾಗಿದ್ದಾಳೆ. ಅಷ್ಟಕ್ಕೂ ಆ ಹುಡುಗಿ ಯಾರು, ಗಂಡ ಕೊಲೆ ಮಾಡಿದ್ದಾದರೂ ಯಾಕೆ ಎನ್ನುತ್ತೀರಾ ಹಾಗದರೆ ಈ ಸ್ಟೋರಿ ನೋಡಿ..
ಹೌದು ಹೀಗೆ ಸುಟ್ಟು ಕರಕಲಾಗಿರುವ ಮಹಿಳೆಯ ರುಂಡ, ಗುರುತು ಸಿಗದೆ ತಲೆ ಕೆಡಿಸಿಕೊಂಡು ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿಯಲ್ಲಿ. ಮೇ 2 ರಂದು ತೂಬಗೆರೆ ಹೋಬಳಿ ನಾರಸಿಂಹನಹಳ್ಳಿ ಸಮೀಪದ ನಿರ್ಜನ ಅರಣ್ಯದಲ್ಲಿ ಒಂದು ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ದೇಹ ಎಲ್ಲಾ ಬೆಂಕಿಗೆ ಸಂಪೂರ್ಣವಾಗಿ ಬೆಂದಿದ್ದ ಕಾರಣ ಪೋಲೀಸರಿಗೆ ತಲೆ ನೋವಾಯಿತು. ಅಪರಿಚಿತ ಮಹಿಳೆಯ ಕೇಸ್ ನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸರು ಪ್ರಖರಣ ದಾಖಲಿಸಿಕೊಂಡು ತನಿಖೆ ಪ್ರಾರಂಭ ಮಾಡಿದರು.
ಮೊದಲಿಗೆ ಯಾವುದಾದರೂ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಪ್ರಕರಣಗಳು ದಾಖಲಾಗಿವೆಯಾ ಎಂದು ಪತ್ತೆ ಹಚ್ಚಲು ಮುಂದಾದರೂ. ಈ ವೇಳೆಯಲ್ಲಿ ಪೋಲೀಸರಿಗೆ ಒಂದು ಬಲವಾದ ಅನುಮಾನ ಕಾಡತೊಡಗಿತು. ಅನುಮಾನಕ್ಕಿಂತ ಮೊದಲು ಸಾವನ್ನಪ್ಪಿರುವ ಮಹಿಳೆಯ ಗುರುತು ಪತ್ತೆ ಹಚ್ಚಲು ಮುಂದಾದರೂ. ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಒಂದು ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ದೂರುದಾರರನ್ನ ಕರೆಸಿ ಗುರುತು ಪತ್ತೆಹಚ್ಚಲು ಪೋಲೀಸರು ಮುಂದಾದರು.
ಈ ವೇಳೆ ಜಾಗದಲ್ಲಿ ಸಿಕ್ಕ ಕಾಲ್ಗೆಜ್ಜೆ, ಕಿವಿಯೋಲೆ, ಕಾಲುಂಗುರ ಹಾಗೂ ಚಪ್ಪಲಿಯ ಭಾಗ ಆಕೆಯ ಗುರುತು ಪಚ್ಚಲು ನೆರವಾಯಿತು. ಜೊತೆಗೆ ಹಂತಕ ಯಾರೆಂಬ ಸತ್ಯವನ್ನೂ ಬಯಲಾಗಿಸಿತು. ದೊಡ್ಡಬಳ್ಳಾಪುರದ ಕರೇನಹಳ್ಳಿಯ ನಿವಾಸಿ 22 ವರ್ಷ ವಯಸ್ಸಿನ ವೀಣಾ ತನ್ನ ಪತಿಯಿಂದಲೇ ಧಾರುಣವಾಗಿ ಹತ್ಯೆಗೀಡಾದ ದುರ್ದೈವಿ. ಪತಿ ರವಿಚಂದ್ರನೇ ಹಂತಕ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.
ವೀಣಾ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಏ.21 ರಂದು ತನ್ನ ಪತ್ನಿ ಕೆಲಸಕ್ಕೆ ಹೋದವಳು ವಾಪಸ್ ಬರಲಿಲ್ಲ ಎಂದು ಹೇಳಿ ಪತಿ ರವಿಚಂದ್ರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ. ಮರುದಿನ ಬಂದು ಮಹಿಳಾ ಠಾಣೆಗೆ ದೂರು ನೀಡುವಂತೆ ಪೊಲೀಸರು ತಿಳಿಸಿದ್ದರು. ಆದರೆ, ರವಿಚಂದ್ರ ಏ.25 ರಂದು ಬಂದು ದೂರು ದಾಖಲಿಸಿದ್ದ. ಇದಾದ ಒಂದು ವಾರಕ್ಕೆ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾಗಿರುವ ಅಪರಿಚಿತ ಮಹಿಳೆಯ ಶವ ನೋಡಿ ಪೊಲೀಸರಿಗೆ ತಿಳಿದಿದ್ದಾರೆ. ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾದಿಕ್ ಪಾಷ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಯಾವುದೇ ಸಾಕ್ಷ್ಯ ಸಿಗದಂತೆ ಮೃತದೇಹ ಸುಟ್ಟು ಹಾಕಿದ್ದರಿಂದ ತನಿಖೆ ಸವಾಲಾಗಿ ಪರಿಣಮಿಸಿತ್ತು.
ಅಪರಿಚಿತ ಮಹಿಳೆಯ ಮೃತದೇಹ ಸಿಕ್ಕ ಜಾಗದಲ್ಲಿ ದೊರೆತ ಕಾಲುಂಗುರ, ಕಾಲ್ಗೆಜ್ಜೆಯನ್ನು ನಾಪತ್ತೆಯಾದ ಮಹಿಳೆಯ ಸಂಬಂಧಿಕರಿಗೆ ತೋರಿಸಿದಾಗ ಗುರುತು ಪತ್ತೆಯಾಯಿತು. ನಂತರ ಮೃತಳ ಗಂಡನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟ. ಆರೋಪಿ ರವಿಚಂದ್ರ ಪಕ್ಕದ ಮನೆ ಕಲ್ಪನಾ ಎಂಬ ಮಹಿಳೆಯ ಜೊತೆಯಲ್ಲಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ವಿಷಯ ವೀಣಾಳಿಗೆ ಗೊತ್ತಾಗಿ ನಿತ್ಯ ಗಲಾಟೆ ನಡೆಯುತ್ತಿತ್ತು.
Pomegranate Juice: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ!
ಆದರೆ, ಆಂಟಿಯನ್ನು ಬಿಡಲು ಒಲ್ಲದ ರವಿಚಂದ್ರ, ಮಧ್ಯರಾತ್ರಿ ಹೆಂಡತಿ ಮಲಗಿದ ಮೇಲೆ ರೂಮಿಗೆ ಬೀಗ ಹಾಕಿಕೊಂಡು ಆಂಟಿ ಮನೆ ಸೇರಿಕೊಳ್ಳುತ್ತಿದ್ದ. ಈ ಕುರಿತು ಹಲವಾರು ಬಾರಿ ನ್ಯಾಯ ಪಂಚಾಯಿತಿ ಮಾಡಿ ಗಂಡನಿಗೆ ಬುದ್ಧಿವಾದ ಹೇಳಿದರೂ ಉಪಯೋಗವಾಗಲಿಲ್ಲ. ಇದನ್ನು ಹೀಗೆ ಬಿಟ್ಟರೆ ನನಗೆ ತೊಂದರೆ ಎಂದು ಭಾವಿಸಿ ಹೆಂಡತಿಯನ್ನು ಮುಗಿಸಲು ರವಿ ಸಂಚು ರೂಪಿಸಿದ್ದ. ಏಪ್ರಿಲ್ 21 ರಂದು ಆಕೆ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿ ಹೋಗಿ, ಕೆಲಸ ಬಿಟ್ಟ ನಂತರ ಹೆಂಡತಿಯನ್ನು ಬೈಕ್ ನಲ್ಲಿ ಜೊತೆಯಾಗಿ ಕರೆದುಕೊಂಡು ತೂಬಗೆರೆ ಸಮೀಪದ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶಕ್ಕೆ ಹೋಗಿದ್ದ. ಅಲ್ಲಿ ಕೆಲಹೊತ್ತು ಇಬ್ಬರ ನಡುವೆ ಮಾತುಕತೆ, ಗಲಾಟೆ ನಡೆದಿದೆ.
ಹೆಂಡತಿ ತನ್ನ ಮಾತು ಕೇಳದಿದ್ದಾಗ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಸಾಕ್ಷಿ ನಾಶ ಮಾಡಲು ಬೈಕಿನಿಂದ ಪೆಟ್ರೋಲ್ ತೆಗೆದು ಶವವನ್ನು ಸುಟ್ಟುಹಾಕಿದ್ದಾನೆ. ಅಂದು ರಾತ್ರಿ ಮನೆಗೆ ಬಂದವನು ತನಗೇನು ಗೊತ್ತೇ ಇಲ್ಲ ಎಂಬಂತೆ, ಅಕ್ಕಪಕ್ಕದ ಮನೆಯ ಬಳಿ ಹೋಗಿ ವೀಣಾ ಇದ್ದಾಳಾ ಎಂದು ಕೇಳಿದ್ದಾನೆ, ರಾತ್ರಿ 10 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಹೆಂಡತಿ ಕಾಣೆಯಾಗಿರುವ ಬಗ್ಗೆ ದೂರು ನೀಡಲು ಬಂದಿದ್ದ. ಗ್ರಾಮಾಂತರ ಠಾಣೆ ಪೊಲೀಸರು ಮಹಿಳಾ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದರು.
ಕೊಲೆ ಆರೋಪಿಗೆ ಕೆಲ ದಿನಗಳ ಹಿಂದೆ ಹರ್ನಿಯಾ ಆಪರೇಷನ್ ಆಗಿತ್ತು, ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂದು ವೈದ್ಯರು ಸಲಹೆ ನೀಡಿದ್ದರು. ಆಗ ತನ್ನ ಹೆಂಡತಿ ಮೇಲೆ ಸದಾ ಅನುಮಾನ ಪಡುತ್ತಿದ್ದ. ಹೆಂಡತಿಯ ಫೋನ್ ಪರಿಶೀಲನೆ, ಆಕೆಯ ಚಲನವಲನದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ. ಆದರೆ ತಾನು ಮಾತ್ರ ಬೇರೊಬ್ಬ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ, ಈತನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕಲ್ಪನಾ ಪತಿ ಲಾರಿ ಡ್ರೈವರ್ ಆಗಿದ್ದ. ಒಂದೆರಡು ತಿಂಗಳು ಮನೆಯತ್ತ ಬರುತ್ತಿರಲಿಲ್ಲ.
ಇದೇ ಅವಕಾಶಕ್ಕಾಗಿ ಕಾದು ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ. ನ್ನೂ ವೀಣಾ ಕೊಲೆ ಆರೋಪದಲ್ಲಿ ರವಿಯನ್ನು ಬಂಧನ ಮಾಡಿರುವ ವಿಚಾರ ತಿಳಿದು ಈತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಕರೇನಹಳ್ಳಿ ನಿವಾಸಿ ಕಲ್ಪನಾ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಟ್ಟಾರೆ ಒಂದು ಅಕ್ರಮ ಸಂಬಂದ ಎರಡು ಜೀವಗಳನ್ನು ಬಲಿ ತಗೆದುಕೊಂಡರೆ, ಕೊಲೆ ಮಾಡಿದ ವ್ಯಕ್ತಿ ಜೈಲು ಸೇರಿಕೊಂಡ. ಕೊಲೆಯಾದ ವೀಣಾ ಗೆ ಒಂದು ಗಂಡು ಮಗು, ಆತ್ಮಹತ್ಯೆ ಮಾಡಿಕೊಂಡ ಕಲ್ಪನಾ ಗೆ ಒಂದು ಹೆಣ್ಣು ಮಗು ಇದೆ. ತಂದೆ ತಾಯಿ ಆಸರೆ ಇಲ್ಲದೆ ಬೆಳೆದು ಮದುವೆ ಆದ ವೀಣಾ ಮಗು ಈಗ ಪೋಷಕರಿಲ್ಲದೆ ತಾಯಿ ರೀತಿಯಲ್ಲಿಯೇ ಅನಾಥವಾಗಿದೆ. ದೊಡ್ಡವರ ಕಾಮದಾಟಕ್ಕೆ ಎರಡು ಮಕ್ಕಳು ಅನಾಥರಾಗಿದ್ದಾರೆ.