ಇತ್ತೀಚೆಗೆ ಹದಿಹರೆಯದವರಿಗೆ ಕೂಡ ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮಧುಮೇಹಿಗಳು ಮೊಸರು ಮತ್ತು ಬಿಳಿ ಉಪ್ಪನ್ನು ಮಿತವಾಗಿ ಸೇವಿಸಬೇಕು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಇದಕ್ಕೆ ಕಾರಣವೇನು?
ಮಧುಮೇಹ ಹೊಂದಿರುವ ಜನರು ಸರಳವಾದ ಕಾರ್ಬೋಹೈಡ್ರೇಟ್ಗಳು, ಸಕ್ಕರೆ ಸೇರಿಸಿದ ಪಾನೀಯಗಳು, ಪ್ಯಾಕ್ ಮಾಡಿದ ಆಹಾರ ಮತ್ತು ಕರಿದ ಆಹಾರಗಳನ್ನು ಸೇವಿಸಬಾರದು ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಅವುಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅಪಾಯ ಹೊಂದಿರುತ್ತವೆ. ಇದು ದೀರ್ಘಾವಧಿಯಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದರೆ, ಸಕ್ಕರೆ ಮಟ್ಟವನ್ನು ಹೆಚ್ಚಿಸದ ಕೆಲವು ಆಹಾರಗಳನ್ನು ಕೂಡ ವೈದ್ಯರು ಮಧುಮೇಹಿಗಳಿಗೆ ಮಿತವಾಗಿ ಸೇವಿಸಲು ಸೂಚಿಸುತ್ತಾರೆ. ಅವುಗಳಲ್ಲಿ ಮೊಸರು ಮತ್ತು ಉಪ್ಪು ಕೂಡ ಸೇರಿದೆ.
ಮೊಸರು ಮತ್ತು ಬಿಳಿ ಉಪ್ಪು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಈ ಬಗ್ಗೆ ಆಯುರ್ವೇದ ತಜ್ಞರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ದೀರ್ಘಾವಧಿಯ ತೊಡಕುಗಳನ್ನು ತಡೆಗಟ್ಟಲು ಮಧುಮೇಹ ಹೊಂದಿರುವವರು ಅವಾಯ್ಡ್ ಮಾಡಬೇಕಾದ 3 ಆಹಾರಗಳ ಬಗ್ಗೆ ತಿಳಿಸಿದ್ದಾರೆ.
1. ಮೊಸರು:
ಮೊಸರು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ಹಾಗೇ, ತೂಕವನ್ನು ಕೂಡ ಹೆಚ್ಚಿಸಬಹುದು ಮತ್ತು ಚಯಾಪಚಯವನ್ನು ನಿಧಾನಗೊಳಿಸಬಹುದು. ಆಯುರ್ವೇದ ತಜ್ಞರ ಪ್ರಕಾರ ಮೊಸರು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮೊಸರು ನಾವೆಲ್ಲರೂ ಅಂದುಕೊಂಡಂತೆ ತಂಪಾದ ಪದಾರ್ಥವಲ್ಲ. ಅದು ಬಿಸಿ ಪ್ರಕೃತಿಯನ್ನು ಹೊಂದಿರುತ್ತದೆ. ಮೊಸರನ್ನು ಜೀರ್ಣಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇದು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ಕಫ ಹೆಚ್ಚಾದಾಗ, ನೀವು ಹೆಚ್ಚು ತೂಕವನ್ನು ಪಡೆಯುತ್ತೀರಿ. ಆದ್ದರಿಂದ, ಮಧುಮೇಹ, ಸ್ಥೂಲಕಾಯತೆ, ಕೊಲೆಸ್ಟ್ರಾಲ್ ಇರುವವರು ಮೊಸರನ್ನು ಅವಾಯ್ಡ್ ಮಾಡುವುದು ಉತ್ತಮ.
2. ಬಿಳಿ ಉಪ್ಪು:
ಬಿಳಿ ಉಪ್ಪು ನೇರವಾಗಿ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗದಿದ್ದರೂ ಮಧುಮೇಹ ಇರುವವರಲ್ಲಿ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು. ಇದು ಹೃದಯದ ತೊಂದರೆಗಳು, ಮೂತ್ರಪಿಂಡದ ಕಾಯಿಲೆ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮಧುಮೇಹ ಹೊಂದಿರುವ ಜನರು ಅಧಿಕ ರಕ್ತದೊತ್ತಡದಿಂದ ಪ್ರಭಾವಿತರಾಗುವ ಸಾಧ್ಯತೆಯಿದೆ. ಇದು ಹೃದ್ರೋಗ, ಪಾರ್ಶ್ವವಾಯು, ಮೂತ್ರಪಿಂಡ ಕಾಯಿಲೆ ಮತ್ತು ಇತರ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಉಪ್ಪು ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ ಬಿಳಿ ಉಪ್ಪಿನ ಬದಲು ಕಲ್ಲು ಉಪ್ಪು ಅಥವಾ ಹಿಮಾಲಯನ್ ಗುಲಾಬಿ ಉಪ್ಪು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಇತರ ಮಧುಮೇಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
3. ಬೆಲ್ಲ:
ಮಧುಮೇಹಿಗಳಿಗೆ ಸಕ್ಕರೆಗೆ ಹೋಲಿಸಿದರೆ ಬೆಲ್ಲವನ್ನು ಸುರಕ್ಷಿತ ಪರ್ಯಾಯವೆಂದು ಪರಿಗಣಿಸಲಾಗಿದೆಯಾದರೂ ಇದು ಕೂಡ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು. ಮಧುಮೇಹಿಗಳು ಆದಷ್ಟೂ ಸಕ್ಕರೆಯ ಸೆವನೆಯನ್ನು ತಪ್ಪಿಸಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಸಕ್ಕರೆಯ ಮಟ್ಟದ ಏರಿಕೆಯಾಗಿ ಸಮಸ್ಯೆ ಉಂಟಾಗಬಹುದು. ಬೆಲ್ಲವನ್ನು ರಾಸಾಯನಿಕಗಳಿಲ್ಲದೆ ನೈಸರ್ಗಿಕ ಪ್ರಕ್ರಿಯೆಯಿಂದ ತಯಾರಿಸುವುದರಿಂದ ಇದು ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ಆದರೆ, ಅದನ್ನು ಮಿತವಾಗಿ ಸೇವಿಸುವುದು ಉತ್ತಮ.