ಮಡಿಕೇರಿ: ನಾನೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಆಕಾಂಕ್ಷಿ. ಕಾಂಗ್ರೆಸ್ನಿಂದ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ʼನಿಂದ ಟಿಕೆಟ್ಗೆ ಪ್ರಯತ್ನಿಸುವುದರಲ್ಲಿ ತಪ್ಪೇನಿದೆ? ಪಕ್ಷದಲ್ಲಿ ಎಲ್ಲರಿಗೂ ಟಿಕೆಟ್ ಕೊಡುತ್ತಾರೆ ಎಂದು ಪ್ರಯತ್ನ ಮಾಡುವುದಲ್ಲ. ಪ್ರಯತ್ನ ಮಾಡುತ್ತಾ ಮಾಡುತ್ತಾ ಸಿಕ್ಕರೂ ಸಿಗಬಹುದು, ಸಿಕ್ಕದೆಯೂ ಇರಬಹುದು ಎಂದರು.
ಹೈಕಮಾಂಡ್ನಲ್ಲೀಗ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ರಾಜಕೀಯವಾಗಿ ಎಲ್ಲಾ ರೀತಿಯಲ್ಲೂ ನಮ್ಮನ್ನು ಪ್ರೋತ್ಸಾಹಿಸಿದವರು ಅವರು. ಅವರೊಂದಿಗೆ ಕೆಲಸ ಮಾಡಿದ್ದೇನೆ. ನಮ್ಮ ಕೆಲಸದ ಬಗ್ಗೆ ಅವರಿಗೆ ಗೊತ್ತಿದೆ. ನಾನು ಸಂಸದನಾಗಿ ಈಗಾಗಲೇ ಕೆಲಸ ಮಾಡಿದ್ದೇನೆ, ನನ್ನ ಅನುಭವದ ಆಧಾರದ ಮೇಲೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತೇನೆ ಎಂದರು.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸುವುದರಲ್ಲಿ ನಿಮ್ಮ ಪಾತ್ರ ಹೆಚ್ಚು ಇದೆ. ಕಾಂಗ್ರೆಸ್ನವರು ಮತ್ತೆ ನಿಮ್ಮನ್ನು ಒಪ್ಪುತ್ತಾರೆಯೇ ಎಂಬ ಪ್ರಶ್ನೆಗೆ, ಮೂರೂ ಪಕ್ಷಗಳಲ್ಲಿ ಇರುವವರು ಶುದ್ಧವಂತರೇ ಎಂದು ಮರು ಪ್ರಶ್ನೆ ಹಾಕಿದರು. ಸಿದ್ದರಾಮಯ್ಯ ಪರಿಶುದ್ಧ ಕಾಂಗ್ರೆಸ್ ನಾಯಕರೇ? ಯಡಿಯೂರಪ್ಪ ಅವರು ಶುದ್ಧ ಬಿಜೆಪಿಗರಾ? ಎಲ್ಲರೂ ಪಕ್ಷಾಂತರಿಗಳೇ. ನಾವು ಅಂದು ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಅಧಿಕಾರ ಕೊಡಲು ಬಿಜೆಪಿಗೆ ಹೋದವರೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದರು.