ಮಂಡ್ಯ: ಮಾಜಿ ಪ್ರಧಾನಿಯವರ ಮಗನಾದ ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ ಎಂದು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಸಿಎಂ ಹೆಚ್ಡಿಕೆಗೆ ಮಂಡ್ಯ ಎಲ್ಲಾ ರೀತಿಯ ಶಕ್ತಿ ನೀಡಿದೆ. ಈ ಜಿಲ್ಲೆಯ ಜನರು ಅವರಿಗೆ ಸ್ವಂತ ಜಿಲ್ಲೆಗಿಂತ ಹೆಚ್ಚಿನ ಪ್ರೀತಿ,
ಮಹತ್ವ ಕೊಟ್ಟಿದ್ದರು. ಆದರೂ ಅವರು ಇಲ್ಲಿನ ಜನರ ನೆಮ್ಮದಿ ಹಾಳು ಮಾಡುವ ಅವಶ್ಯಕತೆ ಇತ್ತಾ? ನಮ್ಮ ಯುವಕರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ. ನನ್ನ ಮೇಲೆ ಅಥವಾ ಸ್ಥಳೀಯ ಶಾಸಕರ ಮೇಲೆ ದ್ವೇಷ ಮಾಡಿ. ಆದರೆ ಜಿಲ್ಲೆಯ ಜನತೆ ಮೇಲೆ ದ್ವೇಷ ಮಾಡಿ ಗಲಭೆ ಮಾಡಿಸಬೇಡಿ ಎಂದಿದ್ದಾರೆ.
ನಮ್ಮ ಜಿಲ್ಲೆಯ ಜನ ಸ್ವಾಭಿಮಾನ, ಗೌರವದಲ್ಲಿ ರಾಜ್ಯದಲ್ಲೇ ಮಾದರಿ ಆಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಬಂದು ಜನರಿಗೆ ಅವಮಾನ ಮಾಡಬೇಡಿ ಎಂದಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡಲು ಈ ಜಿಲ್ಲೆ ಜನರ ಆಶೀರ್ವಾದ ಕಾರಣ. ಬಾವುಟದ ವಿಚಾರದಲ್ಲಿ ಇವತ್ತು ಪ್ರತಿಭಟನೆ, ಪಾದಯಾತ್ರೆ ಮಾಡ್ತಿದ್ದಾರೆ. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾಕೆ ಇಂತಹ ನಿರ್ಧಾರ ಮಾಡಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾಕೆ ಇಷ್ಟೊಂದು ಆಸಕ್ತಿ ಇಲ್ಲ. ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದ್ದಾರೆ.