ನವದೆಹಲಿ: ಫ್ರೀಜ್ ಆಗಿರುವುದು ಕಾಂಗ್ರೆಸ್ (Congress) ಖಾತೆ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಫ್ರೀಜ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವರು ಉದ್ದೇಶ ಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಮಾತನಾಡಿ, ಒಂದು ಮನೆ ಅಥವಾ ವ್ಯವಹಾರದ ಆರ್ಥಿಕ ಮೂಲಗಳನ್ನು ನಿರ್ಬಂಧಿಸಿದರೆ ಏನಾಗಬಹುದು ಎಂದು ನೀವು ಯೋಚಿಸಿ.
ಒಂದು ತಿಂಗಳಿಂದ ನಮ್ಮ ಖಾತೆಗಳನ್ನು ನಿರ್ಬಂಧಿಸಿದ್ದು ನಮ್ಮ ಪರಿಸ್ಥಿತಿಯೂ ಹೀಗೆ ಆಗಿದೆ. ನಮಗೆ ಚುನಾವಣಾ ಪ್ರಚಾರ (Election Campaign) ಮಾಡಲು ಸಾಧ್ಯವಾಗುತ್ತಿಲ್ಲ, ಜಾಹೀರಾತು ನೀಡಲು ಸಾಧ್ಯವಾಗುತ್ತಿಲ್ಲ, ವಿಮಾನ ಇರಲಿ ರೈಲ್ವೇ ಮೂಲಕ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಬಿಜೆಪಿ ನಾಯಕರು ವಿಶೇಷ ವಿಮಾನದಲ್ಲಿ ಓಡಾಡುತ್ತಿದ್ದಾರೆ ಎಂದು ದೂರಿದರು. ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವ ರಕ್ಷಣೆಗೆ ಇದೆ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಒಂದು ಮಾತು ಆಡುತ್ತಿಲ್ಲ. ಯಾವ ಸಂಸ್ಥೆಗಳು ಮಾತನಾಡುತ್ತಿಲ್ಲ,
ಇದು ಯಾವ ಪ್ರಜಾಪ್ರಭುತ್ವ? ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ, ಇಂದಿಗೂ ನಮ್ಮ ಖಾತೆಗಳು ಫ್ರೀಜ್ ಆಗಿದೆ ನಮ್ಮ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಲೋಕಸಭೆ ಚುನಾವಣೆಗೂ (Lok Sabha Election) ಮುನ್ನ ಕಾಂಗ್ರೆಸ್ (Congress) ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಒಂದು ಕಡೆ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಹಣ ಪಡೆದಿರುವ ಬಿಜೆಪಿ ಸರ್ಕಾರ ನಮ್ಮ ಖಾತೆಗಳನ್ನು ನಿರ್ಬಂಧಿಸುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.