ಶ್ರೀಲಂಕಾದಲ್ಲಿ ಸೀತಾಮಾತೆ ದೇಗುಲ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಈ ದೇಗುಲಕ್ಕೆ ಭಾರತದ ಸರಯೂ ನದಿಯಿಂದ ಪವಿತ್ರ ನೀರನ್ನು ರವಾನೆ ಮಾಡಲಾಗಿದೆ.
ಸೀತಾ ದೇವಿಗೆ ಸಮರ್ಪಿತವಾಗಿರುವ ಸೀತಾ ಅಮ್ಮನ ದೇವಾಲಯದ ಪವಿತ್ರ ಕಾರ್ಯಕ್ರಮಕ್ಕಾಗಿ ಶ್ರೀಲಂಕಾಕ್ಕೆ ಪವಿತ್ರ ಸರಯೂ ನದಿ ನೀರನ್ನು ಕಳುಹಿಸುವ ಪ್ರಕ್ರಿಯೆಯನ್ನು ಭಾರತ ಪ್ರಾರಂಭಿಸಿದೆ.
ಮೇ 19 ರಂದು ಸೀತಾ ಅಮ್ಮನವರ ದೇವಸ್ಥಾನದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಶ್ರೀಲಂಕಾದ ಪ್ರತಿನಿಧಿಗಳು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದ ಪತ್ರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಧಾರ್ಮಿಕ ಸಮಾರಂಭಗಳಿಗೆ ಸರಯೂ ನದಿ ನೀರು ಮತ್ತು ದೇವಾಲಯದಲ್ಲಿ ಸೀತಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲು ವಿನಂತಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಮೇರೆಗೆ ಪ್ರವಾಸೋದ್ಯಮ ಇಲಾಖೆಗೆ ಪವಿತ್ರ ಜಲವನ್ನು ಸಾಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ.
ಇನ್ನು ಶ್ರೀಲಂಕಾ ಮತ್ತು ಉತ್ತರ ಪ್ರದೇಶ ಸರ್ಕಾರದ ಕಾರ್ಯವನ್ನು ಅಯೋಧ್ಯ ರಾಮಜನ್ಮಭೂಮಿ ಟ್ರಸ್ಟ್ ಶ್ಲಾಘಿಸಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವಲ್ಲಿ ಇದರ ಮಹತ್ವ ಅಧಿಕವಾಗಿದೆ.
ಈ ಬಗ್ಗೆ ಮಾತನಾಡಿರುವ ಅಯೋಧ್ಯಾ ತೀರ್ಥ ವಿಕಾಸ ಪರಿಷತ್ನ ಸಿಇಒ ಸಂತೋಷ್ ಕುಮಾರ್ ಶರ್ಮಾ ಅವರು, ‘ಶ್ರೀಲಂಕಾದಲ್ಲಿ ಸೀತಾ ಅಮ್ಮನ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ದೇವಾಲಯದ ಪ್ರತಿನಿಧಿಯು ಉತ್ತರ ಪ್ರದೇಶ ಸರ್ಕಾರದಿಂದ ಸರಯೂ ನದಿ ನೀರನ್ನು ಕೇಳಿದ್ದಾರೆ. ನಾವು ಪವಿತ್ರ ನೀರನ್ನು ಕಲಶದಲ್ಲಿ ಇಟ್ಟು ರವಾನಿಸುತ್ತೇವೆ. ಮೇ 19 ರಂದು ಧಾರ್ಮಿಕ ಕ್ರಿಯೆಗಳು ನಡೆಯಲಿದ್ದು, ಈ ಕ್ರಿಯೆಗಳಿಗೆ ಇದೇ ಪವಿತ್ರ ಜಲವನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.