ವಿಷು ಕೇರಳ ಮತ್ತು ಇನ್ನಿತರ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಆಚರಿಸಲಾಗುವ ಪ್ರಾದೇಶಿಕ ಹಿಂದೂ ಹಬ್ಬವಾಗಿದೆ. ಇದು ಜ್ಯೋತಿಷ್ಯಶಾಸ್ತ್ರದ ಹೊಸ ವರ್ಷದ ಆರಂಭ ಮತ್ತು ಕೇರಳದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ವಿಷುವನ್ನು ಕೇರಳದ ಜನರಿಗೆ ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ ದಿನವನ್ನು ವಿಷು ಎಂದು ಆಚರಿಸಲಾಗುತ್ತದೆ.
ಈ ಹಬ್ಬವು ಕ್ರಿ.ಪೂ 844 ರಿಂದ ಆರಂಭವಾಯಿತು ಎನ್ನುವ ನಂಬಿಕೆಯಿದೆ. ಈ ಬಾರಿ ಸೂರ್ಯನು ಮೇಷ ರಾಶಿಯನ್ನು ಏಪ್ರಿಲ್ 14 ರ ಮಧ್ಯಾಹ್ನ ಪ್ರವೇಶಿಸುತ್ತಾನೆ, ಮರುದಿನ ಅಂದರೆ ಏಪ್ರಿಲ್ 15, ಕೇರಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ವಿಷು ಹಬ್ಬವನ್ನು ಆಚರಿಸಲಾಗುತ್ತದೆ. ವಿಷು ಹಬ್ಬ ಎಂದರೇನು ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷತೆಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.
![Demo](https://ainlivenews.com/wp-content/uploads/2023/12/spoorthi-1.jpg)
ವಿಷು ಹಬ್ಬದ ಜ್ಯೋತಿಷ್ಯ ಮಹತ್ವ:
ವಿಷುವು ಜ್ಯೋತಿಷ್ಯಶಾಸ್ತ್ರದೊಂದಿಗೆ ಪ್ರಮುಖ ಸಂಬಂಧವನ್ನು ಹೊಂದಿದೆ. ಭಾರತೀಯ ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಇದು ಕೇರಳದ ಜ್ಯೋತಿಷ್ಯಶಾಸ್ತ್ರದ ಹೊಸ ವರ್ಷವನ್ನು ಗುರುತಿಸುವ ಹಬ್ಬವಾಗಿದೆ. ಇದು ಮೊದಲ ರಾಶಿ ಮೇಡಂ ಅಥವಾ ಮೇಷ ರಾಶಿಗೆ ಸೂರ್ಯನ ಸಂಚಾರವನ್ನು ಸೂಚಿಸುತ್ತದೆ.
ಈ ಸಂದರ್ಭದಲ್ಲಿ ಹಗಲು ಮತ್ತು ರಾತ್ರಿ ಸಮಾನ ಅವಧಿಗಳನ್ನು ಹೊಂದಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನ ಸೂರ್ಯನು ಮೇಡಂ ಅಥವಾ ಮೇಷ ರಾಶಿಯಲ್ಲಿ ಹತ್ತು ಡಿಗ್ರಿಯಲ್ಲಿ ಇರುತ್ತಾನೆ. ಈ ದಿನದಂದು ಸೂರ್ಯನು ಅತ್ಯಂತ ಶಕ್ತಿಶಾಲಿಯಾಗಿರುತ್ತಾನೆ ಎಂಬುದು ಸಾಂಪ್ರದಾಯಿಕ ನಂಬಿಕೆ, ಮತ್ತು ಜ್ಯೋತಿಷ್ಯವು ಈ ಕಲ್ಪನೆಯನ್ನು ಬೆಂಬಲಿಸುತ್ತದೆ.
ವಿಷು ಹಬ್ಬದ ಪೌರಾಣಿಕ ಮಹತ್ವ:
ವಿಷು ಆಚರಣೆಗೆ ಸಂಬಂಧಿಸಿದ ಕೆಲವು ಪೌರಾಣಿಕ ಕಥೆಗಳಿವೆ. ಅಂತಹ ಒಂದು ಕಥೆಯೆಂದರೆ ಶ್ರೀಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಈ ದಿನ ಕೊಂದನು ಎಂದು ಹೇಳಲಾಗುತ್ತದೆ. ವಿಷು ದಿನದಂದು ಶ್ರೀಕೃಷ್ಣನನ್ನು ಪೂಜಿಸಲು ಇದು ಒಂದು ಕಾರಣವಾಗಿದೆ. ಹಾಗೇ ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ, ಈ ಹಬ್ಬವು ರಾಕ್ಷಸ ರಾಜ ರಾವಣ ಮತ್ತು ಸೂರ್ಯದೇವನಿಗೆ ಸಂಬಂಧಿಸಿದೆ.
ಒಮ್ಮೆ ರಾವಣನು ಸೂರ್ಯನನ್ನು ಪೂರ್ವದಿಂದ ಹುಟ್ಟುವುದನ್ನು ತಡೆಯುತ್ತಾನೆ. ನಂತರ ಸೂರ್ಯದೇವನು ರಾವಣನ ಮರಣದ ನಂತರ ಇಂದು ನಾವು ವಿಷು ಎಂದು ಆಚರಿಸುವ ಹಬ್ಬದ ದಿನದಂದೇ ಮತ್ತೆ ಪೂರ್ವದಲ್ಲಿ ಉದಯಿಸಲು ಪ್ರಾರಂಭಿಸಿದನು. ಹಾಗಾಗಿ ಈ ಹಬ್ಬವು ಸೂರ್ಯ ದೇವನ ಪುನರಾಗಮನವನ್ನು ಸ್ಮರಿಸುವ ದಿನವಾಗಿದೆ. ಈ ದಿನ ಶ್ರೀಕೃಷ್ಣನನ್ನು ಮತ್ತು ಸೂರ್ಯ ದೇವನನ್ನು ಪೂಜಿಸುವುದಕ್ಕೆ ವಿಶೇಷ ಮಹತ್ವವಿದೆ.
ವಿಷುಕಣಿ ಎಂದರೇನು?
ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ಮಲಯಾಳಂನ ‘ಕಣಿ’ ಪದವು ‘ಮೊದಲು ಕಾಣುವವನು’ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ, ವಿಷುಕಣಿಯು ವಿಷುವಿನಲ್ಲಿ ಮೊದಲು ಮುಂಜಾನೆಯನ್ನು ನೋಡುವುದು ಎಂಬುದಾಗಿದೆ. ಈ ದಿನ ನಾವು ಮಂಗಳಕರ ಅಥವಾ ಶುಭ ವಿಷಯಗಳನ್ನು ನೋಡಿದರೆ ಅಥವಾ ಅನುಭವಿಸಿದರೆ ಅದು ವರ್ಷಪೂರ್ತಿ ನಮಗೆ ಅದಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದ ವಿಷು ಹಬ್ಬದ ದಿನದಂದು ಮೊದಲು ವಿಷುಕಣಿಯನ್ನು ನೋಡುವ ವಾಡಿಕೆಯಿದೆ.
ವಿಷುಕಣಿ ಎಂಬುದು ಮಂಗಳಕರ ಮತ್ತು ಅದೃಷ್ಟವನ್ನು ತರುವ ವಸ್ತುಗಳಾಗಿವೆ. ವಿಷುಕಣಿಯಲ್ಲಿ ಮಂಗಳಕರ ವಸ್ತುಗಳಾದ ಅಕ್ಕಿ, ಮಾವು, ಹಲಸು, ತೆಂಗಿನಕಾಯಿ, ನಿಂಬೆ, ಬಾಳೆಹಣ್ಣು, ಅಡಿಕೆ, ಸೌತೆಕಾಯಿಗಳು, ವೀಳ್ಯದೆಲೆಗಳು, ಚಿನ್ನ, ನೋಟುಗಳು ಅಥವಾ ನಾಣ್ಯಗಳು, ರೇಷ್ಮೆ ಬಟ್ಟೆ, ಕನ್ನಡಿ, ಪವಿತ್ರ ಹಿಂದೂ ಪುಸ್ತಕಗಳು, ಕ್ನನಡಿ ತಾಜಾ ಹಣ್ಣುಗಳು, ಹೂವುಗಳನ್ನು ಒಳಗೊಂಡಿರುತ್ತದೆ.
ಈ ಎಲ್ಲಾ ವಸ್ತುಗಳನ್ನು ಆ ಮನೆಯ ಹಿರಿಯ ಮಹಿಳೆ ಒಂದು ಹರಿವಾಣ ಅಥವಾ ದೊಡ್ಡ ತಟ್ಟೆಯಲ್ಲಿಟ್ಟು ಅಲಂಕರಿಸಿ ಶ್ರೀಕೃಷ್ಣನ ವಿಗ್ರಹ ಅಥವಾ ಫೋಟೋದ ಮುಂದೆ ಇಡಲಾಗುತ್ತದೆ. ಈ ವಸ್ತುಗಳನ್ನು ಮನೆಯ ಸದಸ್ಯರು ಮುಂಜಾನೆ ಎದ್ದಾಕ್ಷಣ ಇವುಗಳನ್ನು ನೋಡಿ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಕೆಲವು ಮನೆಯವರು ವಿಷುಕಣಿಯನ್ನು ವೀಕ್ಷಿಸಿದ ನಂತರ ರಾಮಾಯಣ ಅಥವಾ ಭಗವದ್ಗೀತೆಯ ಶ್ಲೋಕಗಳನ್ನು ಸಹ ಓದುತ್ತಾರೆ.
ಇನ್ನಿತರ ಭಾಗಗಳಲ್ಲಿ ವಿಷು ಕಣಿ:
ವಿಷು ಎಂದರೆ ಕಣಿಕಾಣುವ ಹಬ್ಬ. ಮೇಷ ಮಾಸದ ಮೊದಲ ದಿನವೇ ವಿಷು ಕಣಿ. ಹೊಸ ವರ್ಷದ ಆರಂಭದ ದಿನ ಒಳ್ಳೆಯ ಕಣಿ ಕಂಡರೆ ವರ್ಷವಿಡೀ ಶ್ರೇಯಸ್ಸು ಉಂಟಾಗುತ್ತದೆ ಎಂಬ ನಂಬಿಕೆ ಇದರ ಹಿಂದಿದೆ. ಹಾಗಾಗಿ ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ, ಕನಕ ಇತ್ಯಾದಿಯನ್ನು ಅಣಿಗೊಳಿಸಿ ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ.
ವಿಷುವಿನ ದಿನ ಪ್ರಾತಃಕಾಲ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಗುರು ಹಿರಿಯರಿಗೆ ವಂದಿಸಿ, ಆಶೀರ್ವಾದ ಪಡೆದು ಆ ಮೇಲೆ ಕಣಿ ಕಾಣಬೇಕು. ಕಣಿಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕು. ಕನ್ನಡಿಯಲ್ಲಿ ಮುಖ ನೋಡಿದರೆ ಆಯುಷ್ಯವು ಹೆಚ್ಚುತ್ತದೆ, ಸಂಪತ್ತು ಉಂಟಾಗುತ್ತದೆ, ಪಾಪ ದೂರವಾಗುತ್ತದೆ ಎಂಬ ನಂಬಿಕೆ ಇದೆ. ಹತ್ತಿರದ ದೇವಾಲಯಗಳಿಗೂ ಹೋಗಿ ಅಲ್ಲಿ ಇಟ್ಟ ಕಣಿಯನ್ನು ಕಾಣುವುದೂ, ದೇವರಲ್ಲಿ ಪ್ರಾರ್ಥಿಸುವುದು, ಯಶಸ್ಸಿಗಾಗಿ ಬೇಡಿಕೊಳ್ಳುವುದು ನಡೆದು ಬಂದಿದೆ. ದೇವರಿಗೆ ಯಾವತ್ತೂ ಅರ್ಪಿಸದ ಕೊನ್ನೆ ಹೂ (ಕಕ್ಕೆ ಹೂ)ವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.
ವಿಷು ಸಧ್ಯ:
ವಿಷು ಸಧ್ಯವೆಂದರೆ ವಿಷು ಹಬ್ಬದ ದಿನದಂದು ವಿಶೇಷವಾಗಿ ತಯಾರಿಸುವ ಭೋಜನವಾಗಿದೆ. ಈ ಭೋಜನದಲ್ಲಿ ವಸಂತ ಋತುವಿನಲ್ಲಿ ಬೆಳೆಯುವ ಹೊಸ ಆಹಾರ ಪದಾರ್ಥಗಳಿಂದ, ತರಕಾರಿಗಳಿಂದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ: ಗುಜ್ಜೆ ಅಂದರೆ ಎಳೆ ಹಲಸು, ಮಾವು, ಕುಂಬಳಕಾಯಿ ಇತ್ಯಾದಿ ವಸ್ತುಗಳು ಸೇರಿಕೊಂಡಿರುತ್ತದೆ. ಇದರೊಂದಿಗೆ ವಿಷು ಗಂಜಿ ಮತ್ತು ಪಚಡಿಯು ಪ್ರಮುಖವಾದ ಆಹಾರ ಖಾದ್ಯಗಳಾಗಿವೆ.
![](https://ainlivenews.com/wp-content/uploads/2024/01/Ad-Banner-copy-scaled.jpg)