ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಡಮ್ ಗಿಲ್ಕ್ರಿಸ್ಟ್ ನಡೆಸುತ್ತಿರುವ ‘ದಿ ಕ್ಲಬ್ ಪ್ರೈರೀ ಫೈರ್’ ಪಾಡ್ಕಾಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ನ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ.
Lok Sabha Election 2024: ನಾಳೆ ಮೊದಲ ಹಂತದ ಮತದಾನ: ಸಾರ್ವತ್ರಿಕ ರಜೆ ಘೋಷಣೆ
ಈ ಕುರಿತಾಗಿ ಗಿಲ್ಕ್ರಿಸ್ಟ್ ಜೊತೆಗೆ ಚರ್ಚೆಯಲ್ಲಿ ತೊಡಗಿದ ಡ್ಯಾಷಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಟೀಮ್ ಇಂಡಿಯಾದ 11ರ ಬಳಗ ಕಟ್ಟಿ ಸಂದೀಪ್ ಶರ್ಮಾ ಅವರಿಗೆ ಬೌಲಿಂಗ್ ವಿಭಾಗದಲ್ಲಿ ಸ್ಥಾನ ನೀಡಿದ್ದಾರೆ. ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ನಾಯಕ ಹಾಗೂ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಭಾರತದ ಟಿ20 ವಿಶ್ವಕಪ್ ತಂಡದಿಂದ ಹೊರಗಿಟ್ಟಿದ್ದಾರೆ.
ಐಪಿಎಲ್ನಲ್ಲಿ ವಿವಿಧ ಫ್ರಾಂಚೈಸಿಗಳ ಪರ ಆಡಿ ಪಳಗಿರುವ ಸಂದೀಪ್ ಶರ್ಮಾ ಇತ್ತೀಚೆಗೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. ಹೊಸ ಚೆಂಡಿನಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಮುಂಬೈನ ಬಲಿಷ್ಠ ಬ್ಯಾಟರ್ಗಳಿಗೆ ಕಾಟ ಕೊಟ್ಟಿದ್ದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಸಂದೀಪ್ ಶರ್ಮಾ ಈವರೆಗೆ 2 ಪಂದ್ಯಗಳನ್ನು ಆಡಿದ್ದಾರೆ. ಆದರೆ, ನಂತರ ಅವರಿಗೆ ಅವಕಾಶ ಸಿಕ್ಕಿಲ್ಲ.
ಇದೇ ವೇಳೆ ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಲ್ಲ ಏಕೆ? ಎಂಬುದಕ್ಕೆ ಸೆಹ್ವಾಗ್ ಕಾರಣ ಕೂಡ ಕೊಟ್ಟಿದ್ದಾರೆ. ಐಪಿಎಲ್ 2024 ಟೂರ್ನಿಯಲ್ಲಿ ಹಾರ್ದಿಕ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವೈಫಲ್ಯ ಕಂಡಿದ್ದಾರೆ. ಕ್ಯಾಪ್ಟನ್ಸಿಯಲ್ಲೂ ಎಡವಿದ್ದು, ಮುಂಬೈ ಇಂಡಿಯನ್ಸ್ ಆಡಿದ 8 ಪಂದ್ಯಗಳಲ್ಲಿ 5 ಸೋಲುಂಡಿದೆ.
“ಪ್ಲೇಯಿಂಗ್ 11 ಆಯ್ಕೆ ಮಾಡಲು ಹೇಳಿದ್ದೀರಿ. ಹಾರ್ದಿಕ್ ಪಾಂಡ್ಯ ಅವರನ್ನು 15ರ ಬಳಗದಲ್ಲಿ ಆಯ್ಕೆ ಮಾಡಲು ಬಯಸುತ್ತೇನೆ. ಆದರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಆಯ್ಕೆ ಮಾಡುವುದಿಲ್ಲ. 17ನೇ ಐಪಿಎಲ್ ಟೂರ್ನಿಯಲ್ಲಿ ಅವರು ಸಂಪೂರ್ಣ ವೈಫಲ್ಯ ಕಂಡು ಲಯ ಕಳೆದುಕೊಂಡಿದ್ದಾರೆ. ಹೀಗಾಗಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಅವರು ಅರ್ಹರಲ್ಲ,” ಎಂದು ಸೆಹ್ವಾಗ್ ವಿವರಿಸಿದ್ದಾರೆ.