ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣಿತ್ ಮೋರೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ನಟ ವೀರ್ ಪಹಾರಿಯಾ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ಫೆಬ್ರವರಿ 2 ರಂದು ಸೊಲ್ಲಾಪುರದಲ್ಲಿ ಪ್ರಣಿತ್ ಅವರನ್ನು ಥಳಿಸಲಾಗಿತ್ತು. ಈ ಘಟನೆಯ ನಂತರ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಣಿತ್ ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದರು.. ಕೊನೆಗೂ ಅವರ ಮೇಲೆ ಹಲ್ಲೆ ನಡೆಸಿದ ಹನ್ನೆರಡು ಮಂದಿಯ ವಿರುದ್ಧ ಎಫ್ ಐ ಆರ್ ದಾಖದಲಾಗಿದೆ.
ಪ್ರಣಿತ್ ಅವರ ತಂಡವು ಇನ್ಸ್ಟಾಗ್ರಾಮ್ನಲ್ಲಿ ಇಡೀ ಘಟನೆಯನ್ನು ವಿವರಿಸಿ ಪೋಸ್ಟ್ ಹಾಕಿದ್ದಾರೆ. ಸೊಲ್ಲಾಪುರದ 24K ಕ್ರಾಫ್ಟ್ ಬ್ರೂಸ್ನಲ್ಲಿ ಅಭಿಮಾನಿಗಳ ವೇಷ ಧರಿಸಿ ಬಂಧಿದ್ದ 11 ರಿಂದ 12 ಜನರ ಗುಂಪು ಪ್ರಣೀತ್ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದ ವೀರ್ ಪಹಾರಿಯಾ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ತಮ್ಮನ್ನು ಥಳಿಸಲಾಯಿತು’ ಎಂದು ಪ್ರಣಿತ್ ತಂಡ ಹೇಳಿದೆ.
‘ನೀನು ವೀರ್ ಪಹಾರಿಯಾ ಬಾಬಾ ಬಗ್ಗೆ ತಮಾಷೆ ಮಾಡುವುದನ್ನು ಮುಂದುವರಿಸಿದರೆ, ನೀನು ಇನ್ನೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಪ್ರಣಿತ್ ತಂಡಕ್ಕೆ ಹಲ್ಲೆ ಮಾಡಿದವರು ಎಚ್ಚರಿಕೆ ನೀಡಿ ಹೋಗಿದ್ದಾರೆ ಎಂದು ಪ್ರಣಿತ್ ಹೇಳಿದ್ದಾರೆ.
‘ಇನ್ನೂ ಆಘಾತಕಾರಿ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಯಾವುದೇ ಭದ್ರತೆ ಇರಲಿಲ್ಲ. ಪದೇ ಪದೇ ವಿನಂತಿಸಿದರೂ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ನಾವು ಪೊಲೀಸರಿಂದಲೂ ಸಹಾಯ ಕೇಳಿದೆವು. ಆದರೆ ಅವರೂ ಸಹಾಯ ಮಾಡಲಿಲ್ಲ’ ಎಂದು ಪ್ರಣಿತ್ ತಂಡ ಆರೋಪಿಸಿದೆ.
ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವೀರ್ ಪಹಾರಿಯಾ, ‘ಪ್ರಣಿತ್ ಅವರ ಮೇಲೆ ಆದ ಹಲ್ಲೆ ಆಘಾತ ತಂದಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ನಾನು ಟ್ರೋಲ್ನ ಯಾವಾಗಲೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನು ನೋಡಿ ನಗುತ್ತೇನೆ ಮತ್ತು ನನ್ನ ವಿರೋಧಿಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತೇನೆ. ಆದ್ದರಿಂದ, ನಾನು ಇಂತಹ ಘಟನೆಗಳನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ . ಅವರ ಬಳಿ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.