ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟ ಮುಂದುವರೆದಿದೆ. ರಸ್ತೆಗಳು, ಮನೆಮಠಗಳು, ಅಪಾರ್ಟ್ಮೆಂಟ್ ಗಳಿಗೆ ಜಲದಿಗ್ಬಂಧನವಾಗಿದೆ. ಗಾಡಿ ಎತ್ಕೊಂಡು ರಸ್ತೆಗಿಳಿಯುವ ಸವಾರರಿಗೆ ಇದು ನದಿಯೋ, ಸಮುದ್ರವೋ ಎಂಬ ಚಿಂತೆ ಕಾಡ್ತಿದೆ. ಎತ್ತ ಕಣ್ಣಾಯಿಸಿದ್ರೂ ನೀರು ನೀರು ಎಂಬಂತೆ ಬೆಂಗಳೂರು ನೆಂದಕಾಳೂರಾಗಿದೆ. ಈ ಕುರಿತಂತೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ.
ಎಲ್ಲಿಗೋದ್ರೆ ಅಲ್ಲಿ ನೀರು, ಕಾಲಿಟ್ಟಲ್ಲೆಲ್ಲಾ ಮುಳುಗಡೆ, ಮನೆ, ಅಪಾರ್ಟ್ಮೆಂಟ್, ರಸ್ತೆಗಳು, ಪ್ರಮುಖ ಏರಿಯಾಗಳೆಲ್ಲವೂ ನದಿಯಂತೆ ಬದಲಾವಣೆ. ಇದು ನಾವು ಇರೋ ಏರಿಯಾನಾ ಎಂಬ ಅನುಮಾನ ಬೆಂಗಳೂರಿನ ಜನರಲ್ಲಿ ಕಾಡತೊಡಗಿದೆ. ಡಬಲ್ ರೋಡ್, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಹೀಗೆ ಬಹುತೇಕ ಭಾಗದಲ್ಲಿ ಮಳೆ ಅಬ್ಬರದ ಹೊಡೆತ ಭಾರೀ ಪೆಟ್ಟುಬಿದ್ದಿದೆ.
ನಿಜ.. ನಾಡಪ್ರಭು ಕಟ್ಟಿದ ಬೆಂದಕಾಳೂರಿನಲ್ಲಿ ಏಳೆಂಟು ದಿನಗಳಿಂದ ವರುಣ ತನ್ನ ರೌದ್ರ ನರ್ತನ ತೋರಿದ್ದಾನೆ. ಬಿಟ್ಟುಬಿಡದೆ ಕಾಡ್ತಿರೋ ಮಳೆಗೆ ಸಿಲಿಕಾನ್ ಸಿಟಿ ಜನ ನಲುಗಿ ಹೋಗಿದ್ದಾರೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಮತ್ತದೆ ಸಂಕಷ್ಟಕ್ಕೆ ತುತ್ತಾಗಿದೆ. ಎಂಟು ಅಡಿ ನೀರುನಿಂತ ಪರಿಣಾಮ ಅಲ್ಲಿದ್ದ ಎರಡೂ ಸಾವಿರಕ್ಕೂ ಹೆಚ್ಚು ಜನರಿಗೆ ನಡುಕ ಉಂಟುಮಾಡಿದೆ.
ನಿನ್ನೆ ರಾತ್ರಿ ಒಂದು ಗಂಟೆಗೆ ಶುರುವಾದ ಮಳೆ ಅಪಾರ್ಟ್ಮೆಂಟ್ ನಲ್ಲಿದ್ದ ಜನರ ಜೀವವನ್ನ ಹಿಂಡಿ ಹಿಪ್ಪೆ ಮಾಡಿದೆ. ಸಧ್ಯ ಎಲ್ಲಾ ಸಂತ್ರಸ್ತರನ್ನ ರಕ್ಷಣಾ ತಂಡಗಳು ರಕ್ಷಣೆ ಮಾಡಿ ಕರೆತಂದಿದ್ದಾರೆ.
ಯಲಹಂಕದ ಕೆರೆಯ ತಗ್ಗುಪ್ರದೇಶದಲ್ಲೇ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಕಟ್ಟಲಾಗಿದ್ದು, ಅದಕ್ಕೆ ಕಟ್ಟಲಾಗಿರೋ ಗೋಡೆ ದರೆಶಾಯಿಯಾಗಿದೆ. ಇದೇ ಕಾರಣಕ್ಕೆ ವಾರದಿಂದ ಸುರಿಯುತ್ತಿರೋ ಮಳೆರಾಯನ ಆರ್ಭಟಕ್ಕೆ ಕೆರೆ ಕೋಡಿ ಹರಿದು ನೀರು ಅಪಾರ್ಟ್ಮೆಂಟ್ ಒಳಹೊಕ್ಕುತ್ತಿದೆ. ಇದರ ಕೂಗಳತೆ ದೂರದಲ್ಲೇ ಇರುವ ಕೋಗಿಲು ಕ್ರಾಸ್ ಕೂಡ ಮುಳುಗಿದೆ.
ಈ ಕ್ರಾಸ್ ಏಳು ಕೆರೆಯ ನೂರು ಒಂದೇ ಕಡೆ ಸೇರುವ ಪ್ರಮುಖ ಜಾಗವಾಗಿದ್ದು, ನೀರು ಸರಾಗವಾಗಿ ಹರಿಯಲು ಜಾಗವಿಲ್ಲದಂತಾಗಿದೆ. ಹೀಗಾಗಿ ಎಲ್ಲೆಂದರಲ್ಲಿ ನುಗ್ಗಿರುವ ಜಲದಾರೆ ಎರಡು ಕಾರು, ಒಂದು ಆಟೋವನ್ನ ಲಾಕ್ ಮಾಡಿಕೊಂಡಿದೆ. ಹಸಿವಿನಲ್ಲಿರೋ ಹಸುವೊಂದು ಆಹಾರವನ್ನರಸಿ ಬಂದು ನೀರಿನಲ್ಲಿ ಸಿಲುಕಿ ಪರದಾಡಿದೆ.
ನೆಂದಕಾಳೂರಾಗಿ ಬದಲಾಗಿರೋ ಬೆಂಗಳೂರಿಗೆ ಬಾಕಿ ಏಳು ದಿನ ಇದೇ ಸ್ಥಿತಿ ಇರಲಿದೆ. ಅಕ್ಟೋಬರ್ 28ರವರೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂಬ ಸಂದೇಶ ಹವಾಮಾನ ಇಲಾಖೆ ನೀಡಿದೆ.
ಒಟ್ನಲ್ಲಿ.. ನೆಂದು ನೆಗಡಿಯಾಗಿರೋ ಬೆಂಗಳೂರು ನಗರಕ್ಕೆ ವಾರ ಪೂರ್ತಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಈ ಕಾರಣ ಎಲ್ಲೆಲ್ಲಿ, ಇನ್ನೇನ್ ಅವಾಂತರ ಸೃಷ್ಠಿ ಆಗುತ್ತೋ ಅನ್ನೋ ಭೀತಿ ಬೆಂಗಳೂರಿಗರಲ್ಲಿ ಶುರುವಾಗಿದೆ.