ಬೆಂಗಳೂರು: ಒಂದು ಕಡೆ ನಟ ದರ್ಶನ್ (Darshan) ಜಾಮೀನು ತೀರ್ಪು ಮತ್ತೊಂದು ಕಡೆ ರಾಜಕೀಯ ನಾಯಕರ ತೀರ್ಪು ಭಾರಿ ಕುತೂಹಲ ಮೂಡಿಸಿದೆ
ದರ್ಶನ್ ಜಾಮೀನು ಭವಿಷ್ಯ ಇಂದೇ ನಿರ್ಧಾರ: ತೀರ್ಪು ಪ್ರಕಟಕ್ಕೆ ಕೌಂಟ್ ಡೌನ್!
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Development Corporation scam) ಕೇಸ್ನಲ್ಲಿ ಬಂಧಿತರಾಗಿರುವ ಮಾಜಿ ಸಚಿವ ನಾಗೇಂದ್ರ ಜಾಮೀನು ಅರ್ಜಿಯ ತೀರ್ಪು ಸೋಮವಾರ (ಇಂದು) ಪ್ರಕಟವಾಗಲಿದೆ. ಬಹುತೇಕ 12 ಗಂಟೆ ವೇಳೆಗೆ ಜಾಮೀನು ತೀರ್ಪು ಬರುವ ಸಾಧ್ಯತೆಯಿದೆ. ಹಾಗಾಗಿ ಇವತ್ತು ಸಿಟಿ ಸಿವಿಲ್ ನ್ಯಾಯಾಲಯದತ್ತ ಚಿತ್ತ ನೆಟ್ಟಿದೆ.
ಈಗಾಗಲೇ ನಾಗೇಂದ್ರ (BN Nagendra) ವಿರುದ್ಧ ಇಡಿ ಅಧಿಕಾರಿಗಳು ಪ್ರಾಸಿಕ್ಯೂಷನ್ಗೆ ಅನುಮತಿ ಪಡೆದಿದ್ದಾರೆ. ಸದ್ಯ ಸೆಂಟ್ರಲ್ ಜೈಲಲ್ಲಿರೋ ಮಾಜಿ ಸಚಿವರಿಗೆ ಬೇಲ್ ಸಿಕ್ಕಿದರಷ್ಟೇ ಪರಪ್ಪನ ಅಗ್ರಹಾರದಿಂದ ರಿಲೀಸ್ ಆಗಲಿದ್ದಾರೆ.
ಹಗರಣದ ಮಾಸ್ಟರ್ಮೈಂಡ್ ನಾಗೇಂದ್ರ:
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಇಡಿ ಬೆಂಗಳೂರಿನ ಜನಪ್ರತಿನಿಗಳ ವಿಶೇಷ ನ್ಯಾಯಾಲಯಕ್ಕೆ 24 ಮಂದಿ ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಇದೇ ಅಕ್ಟೋಬರ್ 5ರಂದು ಸಲ್ಲಿಸಿತ್ತು. ಪ್ರಕರಣದಲ್ಲಿ ನಾಗೇಂದ್ರ ಮಾಸ್ಟರ್ ಮೈಂಡ್ ಎಂದು ಇಡಿ ಉಲ್ಲೇಖಿಸಿದೆ. ಸತ್ಯನಾರಾಯಣ ವರ್ಮಾ, ಪದ್ಮನಾಭ, ನಾಗೇಶ್ರಾವ್, ನೆಕ್ಕಂಟಿ ನಾಗರಾಜ್, ವಿಜಯ್ಕುಮಾರ್ ಸೇರಿ 24 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಮೇ 2024 ರಲ್ಲಿ ನಿಗಮದ ಉದ್ಯೋಗಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು
ಆರೋಪ ಪಟ್ಟಿಯಲ್ಲಿ ಏನಿದೆ?
ಕರ್ನಾಟಕ ಪೊಲೀಸ್ ಮತ್ತು ಸಿಬಿಐ ದಾಖಲಿಸಿದ ಎಫ್ಐಆರ್ಗಳ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿತು. ಸುಮಾರು 89.62 ಕೋಟಿ ರೂ.ಗಳನ್ನು ನಿಗಮದ ಖಾತೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆರೆಯಲಾದ ನಕಲಿ ಖಾತೆಗಳಿಗೆ ವರ್ಗಾಯಿಸಿ ನಂತರ ಆ ಹಣವವನ್ನು ಶೆಲ್ ಕಂಪನಿಗಳಿಗೆ ಮೂಲಕ ಅಕ್ರಮ ಎಸಗಲಾಗಿದೆ.