ಹುಬ್ಬಳ್ಳಿ:– ನಗರದ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾದ ರಾಜೀವ್ ಲೋಚನ್ ದಾಸ್ ಹಾಗೂ ಸರ್ವ ಭಕ್ತರ ಸಮ್ಮುಖದಲ್ಲಿ ಬೆಳಗಿನ ವಿಶೇಷ ಪೂಜೆ ಪ್ರಾರಂಭವಾಯಿತು.
ಹೂವಿನ ಅಭಿಷೇಕ ಗಂಧದ ಅಭಿಷೇಕ ಅಲ್ಲದೆ ನೂರಾರು ಭಕ್ತರು ಹೂವಿನ ಅಭಿಷೇಕ ಮಾಡುವ ಮುಖಾಂತರ ವೈಕುಂಠ ಏಕಾದಶಿ ಆಚರಿಸಲಾಯಿತು ರಾಜೀವ್ ಲೋಚನ್ ದಾಸ್ ಅವರ ಮಾತನಾಡಿ, ಏಕಾದಶಿ ವೃತವನ್ನು ವಿಷ್ಣುವಿನ ಭಕ್ತರು ಭಗವಂತನ ನಾಮಸ್ಮರಣೆ, ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸುತ್ತಾರೆ. ಏಕಾದಶಿಯು ಪೌರ್ಣಿಮೆ ಅಥವಾ ಅಮಾವಾಸ್ಯೆಯ ನಂತರ ಬರುವ ಹನ್ನೊಂದನೆ ದಿನವಾಗಿದ್ದು ತಿಂಗಳಿಗೆ ಎರಡು ಬಾರಿ ಬರುತ್ತದೆ. ಆದರೆ, ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದಲ್ಲಿ (ಡಿಸೆಂಬರ್-ಜನೇವರಿ) ಬರುವ ಏಕಾದಶಿಯು ಮಹತ್ವದ್ದಾಗಿದ್ದು ವೈಕುಂಠ ಏಕಾದಶಿಯೆಂದು ಕರೆಯಲ್ಪಡುತ್ತದೆ. ಇದು ದಕ್ಷಿಣ ಭಾರತದಾದ್ಯಂತ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲೊಂದಾಗಿದೆ ಎಂದು ಹೇಳಿದರು.
ಈ ವಿಶಿಷ್ಟ ದಿನದಂದು ಈ ಬಾಗಿಲನ್ನು ಪ್ರವೇಶ ಮಾಡಿದವರು ಆಧ್ಯಾತ್ಮಿಕ ಉನ್ನತಿಯನ್ನು ಹೊಂದುತ್ತಾರೆಂದು ನಂಬಲಾಗುತ್ತದೆ ಎಂದು ಹೇಳಿದರು.
ಭಗವಂತನ ಒಂದು ಲಕ್ಷ ನಾಮಗಳು ಜಪಿಸಲ್ಪಡುವ ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ಈ ಸೇವೆಗಾಗಿ ಸುಂದರವಾದ ಶ್ರೀನಿವಾಸ ಗೋವಿಂದನ ಪ್ರತಿಮೆಯನ್ನು ತಯಾರಿಸಲಾಗಿದೆ.
ಮಂಗಳಕರವಾದ ವೆಂಕಟೇಶ್ವರ ಹೋಮವನ್ನು ಸಾಯಂಕಾಲದ 5:00 ಗಂಟೆಗೆ ನೆರವೇರಿಸಲಾಗುವುದು. ವಿಶ್ವಶಾಂತಿಗಾಗಿ ನೂರಾರು ಭಕ್ತರು ಈ ಹೋಮದಲ್ಲಿ ಪಾಲ್ಗೊಳ್ಳುವರು.
ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಗವಂತನನ್ನು ಸ್ತುತಿಸುವ ನೃತ್ಯ, ನಾಟಕ ಮತ್ತು ಸಂಗೀತದಂತಹ ಸಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.ಈ ಸಮಯದಲ್ಲಿ ಇಸ್ಕಾನ್
ಸಂಸ್ಥೆಯ ಉಪಾಧ್ಯಕ್ಷರಾದ ರಘೋತ್ತಮ್ ದಾಸ್
ರಾಮ್ ಗೋಪಾಲ್ ದಾಸ್ ಗುರೂಜಿಗಳು ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿರುವ ನೂರಾರು ಭಕ್ತರು ಉಪಸ್ಥಿತರಿದ್ದರು.