ಪ್ರಯಾಗ್ರಾಜ್: ಕಳೆದ ಜನವರಿ 13ರಿಂದ ಆರಂಭವಾಗಿರುವ ಪ್ರಯಾಗ್ರಾಜ್ ಮಹಾಕುಂಭಮೇಳ 23ನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 26ರವರೆಗೆ ಇನ್ನೂ 23 ದಿನಗಳು ಮಹಾಜಾತ್ರೆ ನಡೆಯಲಿದೆ. ಪ್ರತಿ ದಿನ ಪುಣ್ಯಸ್ನಾನದಲ್ಲಿ ಮಿಂದೇಳಲು ಭಕ್ತರ ದಂಡು ತ್ರಿವೇಣಿ ಸಂಗಮಕ್ಕೆ ಹರಿದು ಬರುತ್ತಿದೆ.
ಇನ್ನೂ ಪ್ರಯಾಗ್ರಾಜ್ ಮಹಾಕುಂಭಮೇಳದ ಪರ್ವಕಾಲದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹತ್ತಿರ ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ಯೋಗ ಸಾಧನೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಪರಂಪರೆಯನ್ನು ಪರಿಚಯಿಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥರು ಪ್ರಯಾಗ್ರಾಜ್ ಮಹಾಕುಂಭಮೇಳಕ್ಕೆ ಕರ್ನಾಟಕದಿಂದ ಆಗಮಿಸಿದಕ್ಕೆ ಹೃದಯ ತುಂಬಿ ಸ್ವಾಗತಿಸಿದರು. ಯೋಗ ಸಾಧನೆಗೆ ಮೂಲಕ ಯೋಗಯುಕ್ತ-ರೋಗಮುಕ್ತ ಸ್ವಸ್ಥ ಸಮಾಜ ನಿರ್ಮಾಣ ಸೇವಾ ಕಾರ್ಯವನ್ನು ಶ್ಲಾಘಿಸಿದರು ಎಂದು ಶ್ರೀ ವಚನಾನಂದ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.