ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಸಕ್ಸಸ್ ಬಳಿಕ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವೆ ವಾಗ್ವಾದ ನಡೆಯುತ್ತಲೆ ಇದೆ. ನಟ ದರ್ಶನ್ ಉಮಾಪತಿ ಅವರನ್ನು ಓಪನ್ ಸ್ಟೇಜ್ ಮೇಲೆ ತಗಡು ಎಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ದರ್ಶನ್ ಕೊಲೆ ಕೇಸ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದು ಇದೀಗ ನಿರ್ಮಾಪಕ ಉಮಾಪತಿ ಗೌಡ ಅವರು ತಮ್ಮ ಸ್ಟೇಟಸ್ನಲ್ಲಿ, ಘಟನೆಗೆ ಪ್ರತಿಕ್ರಿಯೆ ಎಂಬಂತೆ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಈ ಬಗ್ಗೆ ಉಮಾಪತಿ ಗೌಡ ‘ಅವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಇವತ್ತು ಉತ್ತರ ಸಿಕ್ಕಿದೆ’ ಎಂದು ಬರೆದುಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್ ಹಾಕಿರುವ ಉಮಾಪತಿ ಗೌಡ ‘ತಾಳ್ಮೆ ಕೆಲವೊಮ್ಮೆ ಶಕ್ತಿ’ಅಂತ ಬರೆದುಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ಇತ್ತೀಚೆಗೆ ಯಶಸ್ಸು ಕಂಡಿದ್ದ ದರ್ಶನ್ ನಟನೆಯ ‘ಕಾಟೇರ’ ಚಿತ್ರದ ಕಥೆಯ ಬಗ್ಗೆ ಮಾತನಾಡಿದ್ದರು. ‘ಕಾಟೇರ ಕತೆ ಕತೆ ನನ್ನದು’ ಎಂದಿದ್ದರು. ‘ತಗಡೆ, ಯಾವಾಗ್ಲೂ ನನ್ ಹತ್ರಾನೆ ಯಾಕೆ ಗುಮ್ಮಿಸ್ಕೋತೀಯಾ’ ಎಂದು ಕಾಟೇರ ಸಕ್ಸಸ್ ಮೀಟಲ್ಲಿ ದರ್ಶನ್ ಉಮಾಪತಿಗೆ ಹೇಳಿದ್ದರು.
ಇನ್ನೂ ಖಾಸಗಿ ಚಾನಲ್ ಒಂದಕ್ಕೆ ಮಾತನಾಡಿರುವ ಉಮಾಪತಿ ಶ್ರೀನಿವಾಸ್ ಗೌಡ, ‘ನಮ್ಮ ಬೆರಳು ಬೇರೆಯವರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತದೆ. ಅದೇ ರೀತಿ ನಮ್ಮದೇ ಕಣ್ಣಿಗೆ ಚುಚ್ಚಿದರೂ ನೋವಾಗುತ್ತದೆ. ಪೊಲೀಸ್ ಇಲಾಖೆ ಬಗ್ಗೆ ಜನಗಳಿಗೆ ನಂಬಿಕೆ ಬಂದಿದೆ. ದೊಡ್ಡವರಿಗೂ, ಸಣ್ಣವರಿಗೆ ಒಂದೇ ನ್ಯಾಯ. ಮಾರುತಿ ಕಾರಲ್ಲಿ ಹೋಗುವವರಿಗೆ, ಲ್ಯಾಂಬೋರ್ಗಿನಿಯಲ್ಲಿ ಹೋಗುವವರಿಗೆ ಒಂದೇ ನ್ಯಾಯ ಇರಬೇಕು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.
‘ನಮ್ಮನ್ನು ನಂಬಿಕೊಂಡು ಬಂದವರ ಕೈ ಬಿಡಬಾರದು. ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಸ್ವಲ್ಪ ಯೋಚಿಸಬೇಕಿತ್ತು. ತಾಳ್ಮೆ ಅನ್ನೋದು ತುಂಬಾನೇ ಅವಶ್ಯಕವಾಗುತ್ತದೆ. ಹಳ್ಳಕ್ಕೆ ಬಿದ್ದಿದ್ದಾರೆ, ಆಳಿಗೊಂದು ಕಲ್ಲು ಎಸೆಯಬಾರದು. ಅದನ್ನು ನಂಬಿದವನು ನಾನು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.
‘ನಾನು ಮೊದಲು ದರ್ಶನ್ ಗುಂಪಲ್ಲಿ ಇದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗೋದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್. ದರ್ಶನ್ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ.