ಹುಬ್ಬಳ್ಳಿ : ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಣ್ಣಪ್ಪಿಸಿ ತಿರುಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ ಪ್ರಕರಣದಲ್ಲಿ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಜನತಾ ಬಜಾರ ಬಳಿಯ ಚಾಂಗದೇವ ಮಹಾರಾಜ ಗುಡಿ ಹತ್ತಿರ ಮುಕುಂದಪ್ಪ ನಾರಾಯಣ ಓತಾಲಿ (ಹೊರಾಲಿ) ಎಂಬಾತನನ್ನು ಬಂಧಿಸಲಾಗಿದೆ.
ಮತ್ತೋರ್ವ ಮಹಿಳೆ ಬಂಧನ 2010 ರಲ್ಲಿ ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ತನ್ನ ನಾಲ್ಕು ವರ್ಷದ ಮೊಮ್ಮಗಳನ್ನು ಬಸ್ ಹತ್ತಿಸಿ ಬಿಟ್ಟು ಹೋಗಿದ್ದ ಗದಗ- ಬೆಟಗೇರಿ ನಿವಾಸಿ ಖಾಸಿಬಾಯಿ ಮುತಗಾರ ಎಂಬಾಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗದಗ- ಬೆಟಗೇರಿ ನಿವಾಸಿ ಖಾಸಿಬಾಯಿ ಚನ್ನಾಪೂರ ಗ್ರಾಮದ ಬಸ್ ನಿಲ್ದಾಣದಲ್ಲಿ ತನ್ನ 4 ವರ್ಷದ ಮೊಮ್ಮಗಳನ್ನು ದುರುದ್ದೇಶದಿಂದ ಬಸ್ಸಿನಲ್ಲಿ ಹತ್ತಿಸಿ ಬಿಟ್ಟು ಹೋಗಿದ್ದಳು.
ನಂತರ ಈ ಪ್ರಕರಣದ ವಿಚಾರಣಾ ಅವಧಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದಳು. ಪೊಲೀಸರ ಕಣ್ಣಪ್ಪಿಸಿ ಅಡ್ಡಾಡುತ್ತಿದ್ದ ಮಹಿಳೆಯ ಪತ್ತೆಗೆ ಒಂದು ವಿಶೇಷ ತಂಡ ರಚನೆ ಮಾಡಲಾಗಿತ್ತು. ಪೊಲೀಸರು ಕೊನೆಗೂ ಗದಗ ಶಹರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.