ಮಂಡ್ಯ: ಕುಡಿಯುವ ನೀರಿಗೆ ಬಿಟ್ಟು ಒಂದು ಟಿಎಂಸಿ ನೀರು ಇದ್ರು ಅದನ್ನು ರೈತರಿಗೆ ಕೊಡುವ ಮನಸ್ಥಿತಿ ನಮಗಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಟ್ರಯಲ್ ಬ್ಲಾಸ್ಟಿಂಗ್ಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು. 6 ತಿಂಗಳ ಒಳಗೆ ಟ್ರಯಲ್ ಬ್ಲಾಸ್ಟ್ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಟ್ರಯಲ್ ಬ್ಲಾಸ್ಟ್ ಮಾಡಿಸಿ ನಂತರ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಡುತ್ತಾರೆ ಎಂಬ ಆತಂಕ ಕೆಲವರಲ್ಲಿ ಇದೆ.
ರೈತರು ಹೈಕೋರ್ಟ್ ಆದೇಶವನ್ನು ಮನ್ನಿಸಬೇಕು ಎಂಬುದಾಗಿ ಮನವಿ ಮಾಡುತ್ತಿದ್ದೇನೆ ಎಂದು ಚಲುವರಾಯಸ್ವಾಮಿ ಹೇಳಿದರು. ರೈತರನ್ನು ವಿಶ್ವಾಸಕ್ಕೆ ತೆಗದುಕೊಂಡು ಟ್ರಯಲ್ ಬ್ಲಾಸ್ಟ್ ಮಾಡಲಿದ್ದೇವೆ. ಯಾವುದಕ್ಕೂ, ಯಾರಿಗೂ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ರೈತರನ್ನು ಕರೆದು ಈ ಬಗ್ಗೆ ಮಾತಾಡುತ್ತೇವೆ ಎಂದು ಅವರು ತಿಳಿಸಿದರು.
ಕೆಆರ್ಎಸ್ನಿಂದ ನಾಲೆಗಳಿಗೆ ಇನ್ನೊಂದು ಕಟ್ಟು ನೀಡಬೇಕೆಂಬ ರೈತರ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ಬೆಳೆಗೆ ಆಗಲ್ಲ ಎಂದಿದ್ದರೂ ನೀರು ಬಿಟ್ಟು ರಕ್ಷಣೆ ಮಾಡಿದ್ದೇವೆ. ಸಂಕ್ರಾಂತಿ ವೇಳೆ ಅವಕಾಶವಿಲ್ಲದಿದ್ದರೂ 10 ದಿನ ನೀರು ಬಿಟ್ಟಿದ್ದೇವೆ. ಕುಡಿಯೋ ನೀರಿಗೆ ಇರುವುದನ್ನು ಬಿಟ್ಟು ಮಿಕ್ಕ ಒಂದು ಟಿಎಂಸಿ ನೀರನ್ನು ರೈತರಿಗೆ ಕೊಡುತ್ತೇವೆ ಎಂದು ಸಚಿವರು ಹೇಳಿದರು.