ಶಂಕರ್ ನಾಗ್ ಎಂದರೆ ಇಂದಿಗೂ ಯುವಕರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಕಡಿಮೆ ಸಮಯ ಕನ್ನಡ ಚಿತ್ರರಂಗದಲ್ಲಿ ಇದ್ದರೂ ಕೂಡ ಶಂಕರ್ ನಾಗ್ ಮಾಡಿದ ಸಾಧನೆ ಅಪಾರ. ಸಣ್ಣ ವಯಸ್ಸಿಗೆ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡ ಶಂಕರ್ ನಾಗ್, ಬದುಕಿದ್ದ ಕೆಲವೇ ವರ್ಷಗಳಲ್ಲಿ ಹಲವು ಸಿನಿಮಾಗಳನ್ನು ನೀಡಿದರು. ನಿರ್ದೇಶನ, ನಟನೆಯ ಜೊತೆ ನಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದರು. ಅವರನ್ನು ಇಂದು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ಶಂಕರ್ ನಾಗ್ ಅವರು 09 ನವೆಂಬರ್ 1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು.
ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್.
ಬಾಲ್ಯದ ನಂತರ ವಿದ್ಯಾಬ್ಯಾಸಕ್ಕಾಗಿ ಮುಂಬೈಗೆ ತೆರಳಿದ ಶಂಕರ್ ನಾಗ್, ಅಲ್ಲಿನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾಗಿ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತ ಅದರಲ್ಲಿಯೇ ತೀವ್ರವಾಗಿ ತೊಡಗಿಕೊಂಡರು.
‘ಒಂದಾನೊಂದು ಕಾಲ‘ದಲ್ಲಿ ಚಿತ್ರದ ಅಭಿನಯಕ್ಕೆ ಶಂಕರ್ನಾಗ್ಗೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರಿಗೆ ನಿರ್ದೇಶನದ ಕಡೆ ಒಲವು ಬಂತು. ‘ಮಿಂಚಿನ ಓಟ’ ಸಿನಿಮಾವನ್ನು ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದರು. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಆ ಬಳಿಕ ‘ಗೀತಾ’, ‘ಜನ್ಮ ಜನ್ಮದ ಅನುಬಂಧ’ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.
ರಾಜ್ಕುಮಾರ್ ನಟನೆಯ ‘ಒಂದು ಮುತ್ತಿನ ಕಥೆ’ ಚಿತ್ರ ಗಮನ ಸೆಳೆಯಿತು. ಈ ಚಿತ್ರದಲ್ಲಿ ಬರುವ ಅಂಡರ್ವಾಟರ್ ಶೂಟಿಂಗ್ಗಾಗಿ ಶಂಕರ್ ನಾಗ್ ಸಾಕಷ್ಟು ಶ್ರಮ ಹಾಕಿದ್ದರು. 90ರ ದಶಕದಲ್ಲಿ ವಿದೇಶಕ್ಕೆ ಹೋಗಿ ಅಲ್ಲಿನ ಸಿನಿಮಾಗಳನ್ನು ನೋಡಿದ್ದರು. ಆ ತಂತ್ರಜ್ಞಾನ ಕನ್ನಡ ಚಿತ್ರರಂಗಕ್ಕೆ ಬರಬೇಕು ಎಂದು ಶಂಕರ್ನಾಗ್ ಆಲೋಚಿಸಿದ್ದರು. ಈ ಕುರಿತು ಅವರು ಹಲವು ಆಲೋಚನೆಗಳನ್ನು ಮಾಡಿದ್ದರು. ಮೆಟ್ರೋ ಸಾರಿಗೆಯನ್ನು ರಾಜ್ಯಕ್ಕೆ ತರಬೇಕು ಎಂದು ಆಗಲೇ ಆಲೋಚಿಸಿದ್ದರು.