ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ನಗರದ ಕೊಳ್ಳಿ ಕಾಲೇಜು ಮೈದಾನದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ನೀಡುವ ಆಶಾ ಕಿರಣ ಯೋಜನೆಗೆ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಆಶಾಕಿರಣ ಯೋಜನೆಯಡಿ ಸಿದ್ದರಾಮಯ್ಯ ಅವರು ನೇತ್ರ ಸಮಸ್ಯೆವುಳ್ಳ ಮಕ್ಕಳಿಗೆ ಕನ್ನಡಕ ವಿತರಿಸಿದರು. ಕಣ್ಣಿನ ಸಮಸ್ಯೆ ಇರುವವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತಿಸಿದೆ.
ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಕಣ್ಣಿನ ದೋಷ ಇರುವವರಿಗೆ ದೋಷ ಸರಿಪಡಿಸಲು ಆಶಾ ಕಿರಣ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಹಾವೇರಿ ಜಿಲ್ಲೆಗೆ 1400 ಕೋಟಿ ರೂಪಾಯಿ ಹಣ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿದ್ದೇವೆ. ಇದೊಂದೇ ಜಿಲ್ಲೆಗೆ 1400 ಕೋಟಿ ಹಣ ಕೊಟ್ಟಿದ್ದೇವೆ. ಬಜೆಟ್ನಲ್ಲಿ 52000 ಕೋಟಿ ರೂಪಾಯಿ ಹಣ ಗ್ಯಾರಂಟಿಗಾಗಿ ಘೋಷಣೆ ಮಾಡಿದ್ದೇನೆ ಎಂದರು.
ಜನರ ಕೈಗೆ ಹಣ ಕೊಡುವ ಕಾರ್ಯಕ್ರಮ ಯಾರೂ ಕೂಡಾ ಇದುವರೆಗೂ ಮಾಡಿಲ್ಲ. ನಮ್ಮ ವಿರೋಧಿಗಳು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗ ಗ್ಯಾರಂಟಿ ಯೋಜನೆ ಜಾರಿ ಸಾಧ್ಯವಿಲ್ಲ ಅಂತಾ ಇದ್ದರು. ರಾಜ್ಯ ದಿವಾಳಿ ಆಗುತ್ತೆ ಅಂದರು. ನಾವು ಈ ವರ್ಷ 36000 ಕೋಟಿ ಹಣ ಖರ್ಚು ಮಾಡಿದರೂ ದಿವಾಳಿ ಆಗಿಲ್ಲ. ಈ ವರ್ಷಕ್ಕೆ ಬಜೆಟ್ ಗಾತ್ರ 46000 ಕೋಟಿ ಹೆಚ್ಚಾಗಿದೆ. ಹಾಗಾದರೆ ಈ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗೋಕೆ ಸಾಧ್ಯಾನಾ ಎಂದು ಪ್ರಶ್ನಸಿದರು
ವಿರೋಧ ಪಕ್ಷದವರು ಸುಳ್ಳು ಹೇಳಿದರೆ ದಾರಿ ತಪ್ಪಿಸಿದರೆ ಅದಕ್ಕೆ ನೀವೇ ಉತ್ತರ ಕೊಡಬೇಕು. ಅವರಿಗೆ ಅಧಿಕಾರದಲ್ಲಿದ್ದಾಗ ಮಾಡೋಕಾಗಲಿಲ್ಲ, ಕೋಮುವಾದದ ವಿಷ ಬೀಜ ಬಿತ್ತಿ, ಧರ್ಮ ಧರ್ಮಗಳ ನಡುವೆ ಸಂಘರ್ಷ ಮಾಡಿಸಿ ಸಮಾಜದ ಶಾಂತಿ ಹಾಳು ಮಾಡಿದವರಿಂದ ಈ ದೇಶದ ಸಾಮಾಜಿಕ ಪರಿಸ್ಥಿತಿ ಬದಲಾವಣೆ ಆಗಲು ಸಾಧ್ಯವಿಲ್ಲ ಎಂದರು.
ಜನವರಿ 26, 1950 ರಂದು ಹೊಸ ಸಂವಿಧಾನ ಜಾರಿ ಆಗುತ್ತದೆ. ಆರ್ಥಿಕ ಸಮಾಜಿಕ ಅಸಮಾನತೆ ಈ ದೇಶದಲ್ಲಿದೆ. ಸಾಮಾಜಿಕ ಆರ್ಥಿಕ ಅಸಮಾನತೆ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೆ ಸ್ವಾತಂತ್ರ್ಯ ಸಿಕ್ಕರೂ ಸಾರ್ಥಕ ಆಗಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಐದು ಗ್ಯಾರಂಟಿಗಳಿಂದ ಸುಮಾರು 5 ಕೋಟಿ ಜನ ಲಾಭ ಪಡೆಯುತ್ತಿದ್ದಾರೆ. ಬಡತನದಿಂದ ನರಳುತ್ತಿರುವ 5 ಕೋಟಿ ಜನ ಗ್ಯಾರಂಟಿ ಯೋಜನೆಗಳಿಂದ ಮಧ್ಯಮ ವರ್ಗ ತಲುಪುತ್ತಾರೆ ಎಂದರು.
ಬಾಯ್ ಮಾತಲ್ಲಿ ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳುತ್ತಾರೆ. ಬುರ್ಕಾ ಹಾಕಿಕೊಂಡಿರುವವರು, ಟೋಪಿ ಹಾಕಿಕೊಂಡವರು ನಮ್ಮ ಕಚೇರಿಗೆ ಬರಬೇಡಿ ಅಂತಾ ಯತ್ನಾಳ್ ಹೇಳುತ್ತಾರೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದರು.
ನಾವು ತೆರಿಗೆ ಕೊಡುವುದರಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. 4 ಲಕ್ಷ 30 ಸಾವಿರ ಕೋಟಿ ತೆರಿಗೆ ಕೊಡುತ್ತಿದ್ದೇವೆ. ಮಾತೆತ್ತಿದ್ದರೆ ನಮ್ಮ ದುಡ್ಡು ಕೊಡಲ್ಲ ಅಂತಾರೆ. ನಿಮ್ಮದಲ್ಲಪ್ಪ ದುಡ್ಡು, ನಮ್ಮ ದುಡ್ಡು. ನಾವು ಕೊಟ್ಟಿರುವುದನ್ನ ನಾವು ವಾಪಾಸ್ ಕೇಳುತ್ತಿದ್ದೇವೆ. 100 ರೂಪಾಯಿ ತೆರಿಗೆ ನಾವು ಕಟ್ಟಿದರೆ ನಮಗೆ ವಾಪಾಸ್ ಕೊಡೋದು ಕೇವಲ 13 ರೂಪಾಯಿ. ಇದನ್ನು ಕೇಳಿದರೆ ಬಿಜೆಪಿಯವರು ಮೈ ಪರಚಿಕೊಳ್ಳುತ್ತಾರೆ. 16 ನೇ ಹಣಕಾಸು ಆಯೋಗ ಈಗ ರಚನೆ ಆಗಿದೆ. ಆಯೋಗದ ಮುಂದೆ ಸಮರ್ಥವಾಗಿ ವಾದ ಮಾಡುತ್ತೇವೆ ಎಂದರು