ಮಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅಭಿಪ್ರಾಯಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗಿದೆ.
ಭಾರತ ಸಂವಿಧಾನದ ಮೂಲ ಪ್ರತಿಯಲ್ಲಿ ರಾಮಾಯಣದ ಉಲ್ಲೇಖವಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ರಚನೆಯಲ್ಲಿ ಮೂಲಭೂತ ಹಕ್ಕುಗಳನ್ನು ವಿವರಿಸುವ ಮೂಲ ಪ್ರತಿಯ ಮೊದಲ ಪುಟದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ಭಾವಚಿತ್ರ ಇಡಲಾಗಿದೆ. ಈ ಮೂಲಕ ರಾಮನೇ ಜನರ ಹಕ್ಕು ರಕ್ಷಿಸುವ ರಕ್ಷಕ ಎಂದು ಅಂಬೇಡ್ಕರ್ ಅವರೇ ಸಾರಿದ್ದಾರೆ. ಬಹಳ ಸ್ಪಷ್ಟವಾಗಿ ರಾಮರಾಜ್ಯ ಮತ್ತು ರಾಮ ಈ ದೇಶಕ್ಕೆ ಪೂರಕ ಅಂದಿದ್ದಾರೆ ಎಂದು ಹೇಳಿದ್ದಾರೆ.
ಈ ದೇಶದಲ್ಲಿ 65 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ರಾಮನ ಪ್ರತಿಷ್ಠೆ ಬಹಿಷ್ಕಾರ ಮಾಡುತ್ತೆ. ಗಾಂಧೀಜಿಯವರ ರಾಮ ಬೇಕು, ನಿಮ್ಮ(ಬಿಜೆಪಿ) ರಾಮ ಬೇಡ ಅಂದಿದ್ದಾರೆ. ಆದರೆ ವಾಲ್ಮೀಕಿ ನಂಬಿದ, ಗಾಂಧೀಜಿ ಹೇಳಿದ, ಹಿಂದೂ ಸಮಾಜದ ಮರ್ಯಾದ ಪುರುಷೋತ್ತಮ ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ.
ಕಾಂಗ್ರೆಸ್ ನಾಯಕರ ಹೊರತುಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪೂಜಿಸೋ ರಾಮ ಹುಟ್ಟಿದ್ದು ಕೂಡ ಅಯೋಧ್ಯೆಯಲ್ಲಿ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಸಂವಿಧಾನದ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ವಿವೇಕಾನಂದರ ವಿಶ್ವ ವಂದ್ಯ ಭಾರತದ ಹೊಸ್ತಿಲಲ್ಲಿ ನಾವಿದ್ದೇವೆ. ಅಭಿವೃದ್ಧಿ ವಂಚಿತ ಕರ್ನಾಟಕ ಇದೆ, ಅಭಿವೃದ್ಧಿ ಮಾಡದ ಸರ್ಕಾರ ಇದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.