ಮಂಡ್ಯ :- ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಹೊರ ಜಿಲ್ಲೆಯವರಿಗೆ ಭಾವನಾತ್ಮಕವಾಗಿ ಬೆರೆಯುವ ಅವಕಾಶ ನೀಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ತಿಮ್ಮದಾಸ್ ಹೋಟೆಲ್ ಬಳಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಹೋದ ಕಡೆಯಲ್ಲ ಅದು ನನ್ನ ಕರ್ಮಭೂಮಿ ಅಂತಾರೆ. ಅವರಿಗೆ ಜಿಲ್ಲೆ ಬಗ್ಗೆ ಯಾವುದೇ ಭಾವನಾತ್ಮಕ ನಂಟಿಲ್ಲವೆಂದೆರು.
ಕುಮಾರಸ್ವಾಮಿ ರಾಜ್ಯ ನಾಯಕರು. ದೇವೇಗೌಡರ ಮಗ ಅವರ ಬಗ್ಗೆ ಗೌರವವಿದೆ. ನಮ್ಮ ಜಿಲ್ಲೆಗಾಗಿ ರಾಮನಗರವನ್ನ ಪೂರ್ತಿ ತಿರಸ್ಕಾರ ಮಾಡುತ್ತಾರೋ ಅಥವಾ ಅಲ್ಲಿಯೇ ಅರ್ಧ ಬಿಟ್ಟು ಇಲ್ಲಿಗೆ ಬರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನಾಮಪತ್ರ ಸಲ್ಲಿಕೆ ದಿನವೇ ಫಲಿತಾಂಶದ ಚಿತ್ರಣ ಸಿಗಬೇಕು. ಕಾಂಗ್ರೆಸ್ ಅಲೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಜಿಲ್ಲೆಯ ಜನತೆ ಸಾಬೀತು ಮಾಡಬೇಕು. ನಾವು ಜನರ ಮುಂದೆ ನಮ್ಮ ಕೆಲಸ ಇಟ್ಟುಕೊಂಡು ಹೋಗಬೇಕು. ಕಳೆದ ಒಂದು ತಿಂಗಳಿನಿಂದ ನಾವು ಪ್ರಚಾರ ಮಾಡುತ್ತಿದ್ದೇವೆ. ಯಾವ ಯಾವ ತಾಲೂಕಿನಲ್ಲಿ ಹೇಗೆ ಪ್ರಚಾರ ಮಾಡಬೇಕೆಂದು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಸೊಲಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ತಾಲೂಕಿನ ಜನ 24 ಸಾವಿರ ಮತಗಳ ಲೀಡ್ ನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ಉದಯ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದರು. ಲೋಕಸಭಾ ಚುನಾವಣೆಯಲ್ಲಿ ಸಹ ಇದೇ ರೀತಿ ಲೀಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಬಹುಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಕೆ.ಎಂ.ಉದಯ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಈ ಬಾರಿ ಸ್ಟಾರ್ ಚಂದ್ರು ಅವರನ್ನು ಅತಿ ಹೆಚ್ಚು ಲೀಡ್ ನಲ್ಲಿ ಗೆಲ್ಲಿಸಬೇಕು. ಕ್ಷೇತ್ರದ ಜನತೆ ಗೊಂದಲಕ್ಕೆ ಒಳಗಾಗಬೇಡಿ ಅಪಪ್ರಚಾರಕ್ಕೆ ಕಿವಿ ಕೊಡಬೇಡಿ. ನಿಮ್ಮೊಂದಿಗೆ ನಾನು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರ ಇದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ರಾಜ್ಯದ ಜನತೆ ಪರ ದನಿ ಎತ್ತಲು ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ವಿನಂತಿಸಿಕೊಂಡರು.
ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನಾನು ಜೆಡಿಎಸ್ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಮಾತನ್ನು ಕೆಲ ಕಿಡಿಗೇಡಿಗಳು ಕ್ಷೇತ್ರದಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ನಮ್ಮ ತಂದೆ ಜಿ.ಮಾದೇಗೌಡ ಅವರು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ನಾನು ದ್ರೋಹ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಮಂಡ್ಯದ ಆಡಳಿತ ಹಿಡಿದಿದ್ದವರಿಗೆ ಮಾತೇ ಮಾರಕ ಆಯ್ತು. ನಮ್ಮ ತಂದೆಯನ್ನು, ನನ್ನನ್ನು ಸಲಹಿದ್ದೀರಿ ಎಂದು ಚನ್ನಪಟ್ಟಣದಲ್ಲಿ ಹೇಳಿದ್ದಾರೆ. ಈಗ ಇಲ್ಲಿ ಏನ್ ಹೇಳ್ತಾರೋ ಗೊತ್ತಿಲ್ಲ ಎಂದರು.
ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ದೇಶ ಉಳಿಸುವ ಕೆಲಸವಾಗಬೇಕು. ದೇಶ ಉಳಿಸಲು ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದಾರೆ. 60 ವರ್ಷದ ಕಾಂಗ್ರೆಸ್ ಆಸ್ತಿ 600 ಕೋಟಿ ಇದ್ದರೆ, 15 ವರ್ಷ ಆಡಳಿತ ನಡೆಸಿದ ಬಿಜೆಪಿ ಆಸ್ತಿ 5 ಸಾವಿರ ಕೋಟಿ. ಇದು ಘೋಷಿತ ಮಾತ್ರ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಇದು ಪ್ರಮುಖ ಚುನಾವಣೆಯಾಗಿದೆ. ಅಭಿವೃದ್ಧಿ ಅಂದರೆ ಕಾಂಗ್ರೆಸ್ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಜನರ ಮುಂದಿಟ್ಟಿದ್ದು, ಇಂದು ಅವುಗಳ ಅನುಷ್ಠಾನವೂ ಆಗಿದೆ.
ರಾಜ್ಯದ ಹಿಂದೆಂದೂ ಕಾಣದಷ್ಟು ತೀವ್ರವಾದ ಬರ ಪರಿಸ್ಥಿತಿ ಎದುರಾಗಿದೆ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಮಾಡುವಂತೆ ಸಿಎಂ ಖುದ್ದು ಭೇಟಿ ನೀಡಿ ಮನವಿ ಸಲ್ಲಿಸಿದರು ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಅಭಿವೃದ್ಧಿಗೆ ಪ್ರೋತ್ಸಾಹಿಸಲು, ಸಿಎಂ, ಡಿಸಿಎಂ ಕೈ ಬಲಪಡಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಮದ್ದೂರು ತಾಲೂಕು ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಬಡವರ ಪರ, ಬಿಜೆಪಿ ಶ್ರೀಮಂತ ಪರ. ಈಗ ಜೆಡಿಎಸ್ ಬಿಜೆಪಿ ಜತೆ ಹೋಗಿದೆ. ಅಭ್ಯರ್ಥಿ ಯಾರು ನಿಲ್ಲಬೇಕು ಅಂತ ಮೋದಿ ತೀರ್ಮಾನ ಮಾಡುವ ಮಟ್ಟಿಗೆ ಆ ಪಕ್ಷ ಬಂದಿದೆ. ಈ ಜಿಲ್ಲೆಯ ಮಣ್ಣಿನ ಮಗನೇ ಲೋಕಸಭೆಗೆ ಹೋಗಬೇಕು ಕಣ್ಣೀರು ಸುರಿಸುವವರು ಬೇಕಾಗಿಲ್ಲ, ಕಣೀರಧಾರೆಗೆ ಸೊಪ್ಪು ಹಾಕಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಮಾಜಿ ಶಾಸಕ ಬಿ. ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ, ಕೆಎಂಎಫ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಂಠಿಸುರೇಶ್, ಸದಸ್ಯರಾದ ರಾಜೀವ, ಬಸವರಾಜ್, ಮುಖಂಡರಾದ ಎಂ.ಸಿ.ಬಸವರಾಜ್, ಕೆ.ಆರ್.ಮಹೇಶ್, ಚಲುವರಾಜ್, ಮಾರಸಿಂಗನಹಳ್ಳಿ ರಾಮಚಂದ್ರು ಮತ್ತಿತರರು ಇದ್ದರು
ವರದಿ : ಗಿರೀಶ್ ರಾಜ್, ಮಂಡ್ಯ