ಹುಬ್ಬಳ್ಳಿ: ಸಿದ್ದರಾಮಯ್ಯ ಅವರದ್ದು ನಿವೃತ್ತಿ ಸಮಯ, ನಿವೃತ್ತಿ ಆಗ್ಲೇಬೇಕು. ಜನಾನೇ ಅವರನ್ನು ಮನೆಗೆ ಕಳಿಸಲು ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯನವರ ಡ್ರಾಮಾ ಕಂಪನಿ ಟೀಮ್ ದೆಹಲಿಗೆ ಬಂದಿತ್ತು. ಮೋದಿಯವರು ರಾಜ್ಯಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಕಾಂಗ್ರೆಸ್ನವರ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಅಳಿವಿನಂಚಿನಲ್ಲಿದೆ, ಹೀಗಾಗಿ ಗಿಮಿಕ್ ಮಾಡ್ತಿದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಗೆದ್ದೇ ಗೆಲ್ತೀವಿ. ಮನೆಗೆ ನೀರು ಬರದಿದ್ದರೂ ಮೋದಿ ಮೇಲೆ ಹಾಕ್ತಾರೆ. ಒಂದೇ ಸಮುದಾಯಕ್ಕೆ ಹತ್ತು ಸಾವಿರ ಕೊಡ್ತೇನೆ ಅಂತಾರೆ. ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ ಎಂದರು.
ಬೆಂಗಳೂರಿನವರು ಕೇವಲ ಬೆಂಗಳೂರು ಅಭಿವೃದ್ಧಿ ಆಗಲಿ ಎಂದರೆ ಇತರರು ಏನು ಮಾಡಬೇಕು..? ಮೋದಿಯವರು ಕರ್ನಾಟಕದ ಪರವಿದ್ದಾರೆ, ಅಭಿವೃದ್ಧಿಗೆ ಎಲ್ಲಾ ಸಹಾಯ ಮಾಡಿದ್ದಾರೆ. ಸಿದ್ದರಾಮುಯ್ಯ ಸುಮ್ಮನೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಚುನಾವಣೆ ಬರ್ಲಿ, ಸಿದ್ದರಾಮಯ್ಯ ಮನೆಗೆ ಬರ್ಲಿ ಅಂತಾ ಜನಾ ಕಾಯ್ತಿದ್ದಾರೆ. ಗ್ಯಾರಂಟಿ ಹಿಂಪಡೆಯುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.