ಪ್ರತಿ ತರಕಾರಿಯಂತೆಯೂ ಬದನೆಯಲ್ಲಿಯೂ ಕೆಲವು ಉತ್ತಮ ಪೋಷಕಾಂಶಗಳಿವೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಬದನೆಯನ್ನು ಆಹಾರದ ಮೂಲಕ ಸೇವಿಸಲು ಹಿರಿಯರು ಸಲಹೆ ಮಾಡುತ್ತಾರೆ. ಉತ್ತರ ಭಾರತದಲ್ಲಿ ಬದನೆಯನ್ನು ಬೈಂಗನ್ ಎಂದು ಕರೆಯುತ್ತಾರೆ ಹಾಗೂ ತರಕಾರಿಗಳ ರಾಜ ಎಂದು ಪರಿಗಣಿಸುತ್ತಾರೆ. ಇದರಲ್ಲಿ ಹಲವು ಪೋಷಕಾಂಶ ಗಳು, ಖನಿಜಗಳಿದ್ದು ಆರೋಗ್ಯಕ್ಕೆ ಒಳ್ಳೆಯದು. ಬದನೆ ವಾಸ್ತವದಲ್ಲಿ ಕಹಿಯಾಗಿದ್ದರೂ, ಇದನ್ನು ಅನುಭವಿ ಅಡುಗೆ ಗಾರರು ಇತರ ಸಾಮಾಗ್ರಿಗಳನ್ನು ಹಾಕಿ ಅತಿ ರುಚಿಕರವಾಗಿಸುತ್ತಾರೆ.
ಇದರಲ್ಲಿರುವ ಕರಗುವ ನಾರು ಮತ್ತು ಆಂಟಿ ಆಕ್ಸಿಡೆಂಟುಗಳು ಕೆಲವಾರು ಬಗೆಯ ಕ್ಯಾನ್ಸರ್ ಗಳನ್ನು ದೂರವಿಡಲು ನೆರವಾಗುತ್ತವೆ. ಕರಗುವ ನಾರು ಜೀರ್ಣಾಂಗಗಳಲ್ಲಿ ಕಲ್ಮಶ ಉಳಿಸದೇ ಪರಿಪೂರ್ಣವಾಗಿ ವಿಸರ್ಜಿಸಲು ನೆರವಾಗುವ ಮೂಲಕ ಜೀರ್ಣಾಂಗಗಳನ್ನು ಸ್ವಚ್ಛವಾಗಿರಿಸಲು ನೆರವಾಗುತ್ತದೆ. ತನ್ಮೂಲಕ ಕರುಳಿನ ಕ್ಯಾನ್ಸರ್ ನ ಸಾಧ್ಯತೆಯಿಂದ ರಕ್ಷಿಸುತ್ತದೆ. ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಜೀವಕೋಶಗಳಿಗೆ ಮಾಡುವ ಹಾನಿಯನ್ನು ತಪ್ಪಿಸುತ್ತವೆ ಹಾಗೂ ಕೆಲವಾರು ಬಗೆಯ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ.
ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಬದನೆ ಅತ್ಯುತ್ತಮ ಆಹಾರವಾಗಿದೆ. ಏಕೆಂದರೆ ಪ್ರತಿ ನೂರು ಗ್ರಾಂ ಬದನೆಯಲ್ಲಿ ಕೇವಲ ಇಪ್ಪತೈದು ಕ್ಯಾಲೋರಿಗಳು ಮಾತ್ರವೇ ಇದೆ. ಅಲ್ಲದೇ ಇದರಲ್ಲಿರುವ ಕರಗುವ ನಾರು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಅಹಾರ ಸೇವನೆಯಿಂದ ತಪ್ಪಿಸುತ್ತದೆ. ಹಾಗಾಗಿ, ಒಂದು ಪ್ರಮಾಣದ ಬದನೆಯ ಖಾದ್ಯವನ್ನುಸೇವಿಸಿದ ಬಳಿಕ ಮುಂದಿನ ಹೊತ್ತಿನ ಊಟದವರೆಗೂ ಹಸಿವಾಗದೇ ಜೀರ್ಣಕ್ರಿಯೆ ಪೂರ್ಣಗೊಳ್ಳುತ್ತದೆ ಮತ್ತು ತೂಕ ಇಳಿಸುವ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ.
ಹೃದಯದ ಆರೋಗ್ಯವನ್ನು ಕಾಪಾಡುವ ಕೆಲವು ಹಣ್ಣು ಮತ್ತು ತರಕಾರಿಗಳಲ್ಲಿ ಬದನೆಯೂ ಒಂದು. ಇದರಲ್ಲಿರುವ ಕರಗುವ ನಾರು, ಪೊಟ್ಯಾಶಿಯಂ, ವಿಟಮಿನ್ ಬಿ 6, ಮತ್ತು ಪೈಟೋನ್ಯೂಟ್ರಿಯೆಂಟ್ ಗಳಾದ ಫ್ಲೇವನಾಯ್ಡುಗಳು ಹೇರಳವಾಗಿದ್ದು ಹೃದಯದ ರೋಗಗಳ ಸಾಧ್ಯತೆಯನ್ನು ತಗ್ಗಿಸುತ್ತವೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ನರಗಳನ್ನು ಆರೋಗ್ಯಕರವಾಗಿರಿಸಿ ಹೃದಯ ಸ್ತಂಭನದ ಸಾಧ್ಯತೆಯನ್ನು ತಗ್ಗಿಸುತ್ತವೆ.
ಬದನೆಯಲ್ಲಿರುವ ಪೊಟ್ಯಾಶಿಯಂ ದೇಹದಲ್ಲಿ ಎಲೆಕ್ಟ್ರೋಲೈಟುಗಳನ್ನು ನಿಯಂತ್ರಿಸುವ ಅಮೂಲ್ಯ ಖನಿಜವಾಗಿದೆ. ಆಹಾರದಲ್ಲಿರುವ ಉಪ್ಪಿನ ಮೂಲಕ ದೇಹಕ್ಕೆ ಆಗಮಿಸುವ ಸೋಡಿಯಂ ಲವಣವನ್ನು ಸಂತುಲಿತಗೊಳಿಸಲು ಈ ಪೊಟ್ಯಾಶಿಯಂ ಅವಶ್ಯವಾಗಿದೆ. ಸೋಡಿಯಂ ಹೆಚ್ಚಿದ್ದಷ್ಟೂ ಇದನ್ನು ಹೊರಹಾಕಲು ರಕ್ತದೊತ್ತಡ ಹೆಚ್ಚಿಸ ಬೇಕಾಗುತ್ತದೆ. ಹಾಗಾಗಿ ಪೊಟ್ಯಾಶಿಯಂ ಇರುವ ಆಹಾರಗಳನ್ನು ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳು ಸೇವಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಇದರ ಜೊತೆಗೇ ಬದನೆಯಲ್ಲಿ ಆಂಥೋ ಸೈಯಾನಿನ್ ಎಂಬ ಪೋಷಕಾಂಶವೂ ಇದೆ. ಇದು ಸಹಾ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ.