ಹುಬ್ಬಳ್ಳಿ: ಮಕ್ಕಳ ಆರೋಗ್ಯ, ಕಿರಿಯ ಸದಸ್ಯರ ಯೋಗಕ್ಷೇಮಕ್ಕಾಗಿ ಅರೋಗ್ಯ ಸೌಲಭ್ಯಗಳು ಮತ್ತು ಸೇವೆಗಳನ್ನು ಹೆಚ್ಚಿಸುವಲ್ಲಿ ಕೋಠಾರಿ ಮಾನವ ಸೇವಾ ಕೇಂದ್ರವು ಪ್ರೋತ್ಸಾಹದಾಯಕವಾಗಿದೆ ಎಂದು ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಎಸ್ ಎಫ್ ಕಮ್ಮಾರ ಸಂತಸ ವ್ಯಕ್ತಪಡಿಸಿದರು. ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ದಿ. ಶ್ರೀಮತಿ ರೇಷ್ಮಿ ದೇವಿ ಸೋಹನಲಾಲ ಕೋಠಾರಿಯವರ ಸ್ಮರಣಾರ್ಥ ಕೋಠಾರಿ ಪರಿವಾರದರು ನೂತನವಾಗಿ ಉನ್ನತದ ರ್ಜೆಗೇರಿಸಿರುವ ಕೋಠಾರಿ ಮಾನವ ಸೇವಾ ಕೇಂದ್ರ ಸುಧಾರಿತ ಮಕ್ಕಳ ತೀವ್ರ ನಿಗಾ ಘಟಕ (ಪಿಡಿಯಾಟ್ರಿಕ್ ಐಸಿಯು) ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಯಾಗಿ ಆಗಮಿಸಿ ಮಾತನಾಡಿದರು,
ಕಡಿಮೆ ಸಮಯದಲ್ಲಿ ಇಂತಹ ಕೇಂದ್ರ ನಿರ್ಮಾಣ ಮಾಡಿಕೊಟ್ಟ ಕೊಠಾರಿ ಕುಟುಂಬಕ್ಕೆ ಕಿಮ್ಸ್ ಅಭಾರಿಯಾಗಿದೆ. ಹೆಚ್ಚಿನ ದಾನಿಗಳು ಇಂತಹ ಕಾರ್ಯಕ್ಕೆ ಮುಂದಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮಣಕವಾಡದ ಶ್ರೀಗುರು ಅನ್ನದಾನೇಶ್ವರ ಮಹಾಂತಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ,ಸೋಹನಲಾಲ್ ಕೊಠಾರಿಯವರು ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಬಂಗಾರ ಧರಿಸಿದವರು, ದೊಡ್ಡ ದೊಡ್ಡ ಮನೆ, ಆಸ್ತಿಯುಳ್ಳವರು ದೊಡ್ಡವರಲ್ಲ. ಜಗತ್ತಿನಲ್ಲಿ ಕೆಳಗೆ ಬಿದ್ದವರನ್ನು ಮೇಲೆ ಎತ್ತುವರರು ದೊಡ್ಡವರಾಗುತ್ತಾರೆ. ಇಂತಹ ಅಪರೂಪದ ಸಾಲಿಗೆ ಸೋಹನಲಾಲ್ ಕೊಠಾರಿ ಅವರು ಸೇರುತ್ತಾರೆ. ಭಗವಂತ ನೇರವಾಗಿ ತನ್ನಿಂದ ಮಾಡಲು ಆಗದ ಕೆಲಸವನ್ನು ಮಾನವ ರೂಪದ ನಮಗೆ ಮಾಡಲು ಭೂಮಿ ಮೇಲೆ ಜನ್ಮ ತಾಳಿಸಿದ್ದಾನೆ. ಹೀಗಾಗಿ ಪ್ರತಿಯೊಬ್ಬರು ಒಳ್ಳೇಯ ಕಾರ್ಯ ಮಾಡಬೇಕು. ಶುದ್ಧ ಮನಸ್ಸಿನಿಂದ ಸಮಾಜ ಸೇವೆ ಮಾಡಬೇಕು. ಸರಕಾರದ ಜೊತೆ ಜೊತೆಯಲ್ಲಿಯೇ ಸಮಾಜ ಸೇವೆಗೆ ಉಳ್ಳವರು ಮುಂದಾಗಬೇಕು. ಎಷ್ಟು ವರ್ಷ ಬದುಕಿದ್ದೇನೆ ಎಂಬುದು ಮುಖ್ಯವಲ್ಲ. ಬದುಕಿದ ಅವಧಿಯಲ್ಲಿ ಎಷ್ಟು ಸೇವೆ ಮಾಡಿದ್ದೇನೆ ಎಂಬುದು ಮುಖ್ಯ. ಈ ಹಿನ್ನೆಲೆಯಲ್ಲಿ ಸಮಾಜ ಸೇವೆಗೆ ಮುಂದಾಗಿ ಎಂದರು.
ಕಿಮ್ಸ್ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ರಾಮಲಿಂಗಪ್ಪ ಸಿ. ಅಂಟರತಾನಿ ಮಾತನಾಡಿ, ಇದೊಂದು ಉತ್ತಮ ಕಾರ್ಯ. ಮೂರು ತಿಂಗಳ ಅವಧಿಯಲ್ಲಿ ಇಂತಹ ಕಾರ್ಯ ಮಾಡಿ ಕೊಟ್ಟಿದ್ದಕ್ಕೆ ಕಿಮ್ಸ್ ಪರ ಅಭಿನಂದನೆ ಸಲ್ಲಿಸುತ್ತೇವೆ. ಸರಕಾರಿ ಆಸ್ಪತ್ರೆಗಳು ಅಭಿವೃದ್ಧಿ ಯಾಗಬೇಕಾಗಿದೆ. ದಾನಿಗಳು ಇಂತಹ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಕೊಠಾರಿ ಮಾನವ ಸೇವಾ ಕೇಂದ್ರ ನಿರ್ಮಾಣ ಮಾಡಿದ ಸೋಹನಲಾಲ್ ಕೊಠಾರಿ ಅವರು ಮಾತನಾಡಿ, ಹುಬ್ಬಳ್ಳಿ ಜನ ನನ್ನ ಕೈ ಹಿಡಿದು ಬೆಳೆಸಿದ್ದಾರೆ. ಅವರ ಋಣ ನನ್ನ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಜನರ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಕೇಂದ್ರ ಮಾಡಲಾಗಿದೆ ಎಂದರು.
ಜೈನ್ ಸಮುದಾಯದವರು ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ವೈದ್ಯಕೀಯ ಸೇವೆ ಅಗತ್ಯತೆ ಅರಿತು ಕೇಂದ್ರ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಳುಹಿಸಿದ್ದ ಸಂದೇಶವನ್ನು ಡಾ.ಅರುಣಕುಮಾರ ಅವರು ಓದಿದರು. ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್ನ ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಧಾರವಾಡ ಡಿಎಚ್ಓ ಡಾ.ಶಶಿ ಪಾಟೀಲ, ಡಾ.ಅರುಣಕುಮಾರ, ಶಿವಾನಂದ ಭಜಂತ್ರಿ, ಡಾ.ವಿನೋದ ರಟಗೇರಿ, ಡಾ.ಪ್ರಕಾಶ ವಾರಿ, ನರೇಶಲಾಲ್ ಕೊಠಾರಿ, ಸುರೇಶಕುಮಾರ ಕೊಠಾರಿ, ಜಿತೇಂದ್ರ ಮಜೇಥಿಯಾ ಸೇರಿದಂತೆ ಇತರರು ಇದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)